ಮಂಡ್ಯ: ಮಂಡ್ಯದ ಸಂತೆಯಲ್ಲಿ ವ್ಯಾಪಾರಸ್ಥರೊಬ್ಬರು ಲೋಕೋಪಯೋಗಿ ಸಚಿವ ಎಚ್ಡಿ ರೇವಣ್ಣ ಅವರ ಹೆಸರಿನಲ್ಲಿ ನಿಂಬೆಹಣ್ಣು ಮಾರುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶುಕ್ರವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಯುಗಾದಿ ಹಬ್ಬದ ಸಂತೆಯಲ್ಲಿ ನಿಂಬೆಹಣ್ಣು ವ್ಯಾಪಾರಿಯೊಬ್ಬರು ರೇವಣ್ಣ ನಿಂಬೆಹಣ್ಣು ಎನ್ನುತ್ತ ಮಾರಾಟ ಮಾಡುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಗ್ರಾಹಕರನ್ನು ಸೆಳೆಯಲು ವ್ಯಾಪಾರಿ ನಿಂಬೆಹಣ್ಣಿಗೆ ರೇವಣ್ಣ ಅವರ ಹೆಸರಿಟ್ಟು ಮಾರಾಟ ಮಾಡಿದ್ದಾರೆ.
ವ್ಯಾಪಾರಿ “ಬನ್ನಿ ತಗೋಳಿ ನಾಟಿ ನಿಂಬೆಣ್ಣು, ರೇವಣ್ಣನ್ ನಿಂಬೆಹಣ್ಣು. ಹತ್ತು ರೂಪಾಯಿಗೆ ಮೂರು” ಎಂದು ಸಂತೆಯಲ್ಲಿ ಕೂಗಿ ಕರೆಯುತ್ತ ಹಾಸ್ಯಾಸ್ಪದವಾಗಿ ವ್ಯಾಪಾರ ಮಾಡುತ್ತಿದ್ದನ್ನು ಕಂಡು ಜನರು ಇನ್ನುಂದೆ ರೇವಣ್ಣ ಬರಿ ಜೋತಿಷ್ಯಕಷ್ಟೆ ಅಲ್ಲ ನಿಂಬೆಹಣ್ಣಿಗೂ ಫೇಮಸ್ ಆಗಿಬಿಟ್ಟರು ಎಂದು ವ್ಯಂಗ್ಯವಾಡಿದರು.
ವ್ಯಾಪಾರಸ್ಥ ವ್ಯಂಗ್ಯವಾಗಿ ಗ್ರಾಹಕರನ್ನು ಕರೆಯುವುದು ಸ್ಥಳೀಯರ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋಗೆ ನೆಟ್ಟಿಗರು ಸಖತ್ ಲೈಕ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸದ್ಯ ಸದ್ದು ಮಾಡುತ್ತಿದೆ.