ಚಿಕ್ಕಬಳ್ಳಾಪುರ: ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಮೋದಿ 48,000 ಕೋಟಿ ರೂಪಾಯಿ ದರೋಡೆ ಮಾಡಿದ್ದಾರೆ ಅಂತ ಸಂಸದ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ರಫೆಲ್ ಯುದ್ಧ ವಿಮಾನ ಖರೀದಿ ವಿಚಾರ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಮೊಯ್ಲಿ, ಈ ಹಿಂದೆ ಯುಪಿಎ ಸರ್ಕಾರ ಸರ್ಕಾರಿ ಸ್ವಾಮ್ಯದ ಎಚ್ ಎ ಎಲ್ ಕಂಪೆನಿಗೆ ರಫೆಲ್ ಯುದ್ಧ ವಿಮಾನ ತಯಾರಿಗೆ ಅವಕಾಶ ಮಾಡಿಕೊಟ್ಟಿತ್ತು. ಪ್ರಧಾನಿ ಮೋದಿ ಈಗ ತಮ್ಮ ಸ್ನೇಹಿತ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿಗೆ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆ ಕೊಡಿಸಿದ್ದಾರೆ. ಮೋದಿಯವರೇ ಮುಂದೆ ನಿಂತು ಈ ಕೆಲಸ ಮಾಡಿದ್ದಾರೆ. ಇದು ದೇಶದ ಅತ್ಯಂತ ದೊಡ್ಡ ಹಗರಣವಾಗಿದ್ದು, 48,000 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಮೊಯ್ಲಿ ವಾಗ್ದಾಳಿ ನಡೆಸಿದರು.
ಈ ಹಗರಣದ ಹಣದಲ್ಲಿ ಮೋದಿ ಏನ್ ಬೇಕಾದರೂ ಮಾಡುತ್ತಾರೆ. ಕರ್ನಾಟಕದಲ್ಲಿ ಅಪರೇಷನ್ ಕಮಲ ಮಾಡೋಕೆ ಒಬ್ಬ ಎಂಎಲ್ಎ ಗೆ 50 ಕೋಟಿ ರೂ. ಕೊಡುತ್ತಾರಂತೆ. ಅದಲ್ಲದೆ ಚುನಾವಣೆಗೆ 50 ಕೋಟಿ ಕೊಡುತ್ತಾರಂತೆ. ಹೀಗೆ ಇಂತಹ ಹಣವನ್ನ ಮೋದಿ, ಅಮಿತ್ ಶಾ ಚುನಾವಣೆಗೆ ಬಳಸುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ಹಗರಣದ ಬಗ್ಗೆ ರಾಹುಲ್ ಗಾಂಧಿ ಮೊದಲೇ ಹೇಳುತ್ತಿದ್ದರು. ಆದರೆ ದರೋಡೆಕೋರ ಮೋದಿಗೆ ಯಾವುದೇ ನಾಚಿಕೆ ಗೌರವ ಇಲ್ಲ ಅಂತ ಮೋದಿ ವಿರುದ್ಧ ಖಾರವಾಗಿ ಮಾತನಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv