ಚಿತ್ರದುರ್ಗ: ಸಿಎಂ ಕುಮಾರಸ್ವಾಮಿಯವರು ಆಣೆ ಇಡಬಾರದು, ಅಳಬಾರದು ಇದನ್ನೆರಡು ಬಿಟ್ಟು ಭದ್ರವಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳ ನಡವಳಿಕೆ ಬಗ್ಗೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಆದವರು ಅಳಬಾರದು, ಆಣೆ ಪ್ರಮಾಣ ಮಾಡಬಾರದು. ಆದ್ರೆ ಕುಮಾರಸ್ವಾಮಿಯವರು ಮಗನ ಮೇಲೆ ಆಣೆ ಮಾಡಿದ್ದಾರೆ. ಮಗನ ಮೇಲೆ ಆಣೆ ಏಕೆ ಮಾಡಬೇಕು. ರಾಜಕಾರಣದಲ್ಲಿ ಕುಟುಂಬವನ್ನು ಎಳೆಯಬಾರದು. ಮುಖ್ಯಮಂತ್ರಿ ಮಾತು ಅಂದರೆ ಆದೇಶ. ಅದನ್ನ ಯಾರು ನಂಬೋದಿಲ್ಲ ಅಂತ ಹೇಳಲ್ಲ. ಆದ್ರೆ ಆಣೆ ಇಟ್ಟು ಕೆಲಸ ಮಾಡುವುದು ಸರಿ ಅಲ್ಲ. ಅಳೋದು, ಆಣೆ ಪ್ರಮಾಣ ಮಾಡೋದು ಬಿಟ್ಟು ಮುಖ್ಯಮಂತ್ರಿ ಕೆಲಸ ಮಾಡಲಿ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮಂತ್ರಿ ಸ್ಥಾನಕ್ಕೆ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ ನಡೆಯುತ್ತಿದೆ. ಅದನ್ನ ಮೈತ್ರಿ ಮುಖಂಡರು ಹೇಳುತ್ತಿಲ್ಲ, ಈ ವಿಚಾರ ಅವರ ಕೈ ಮೀರಿ ಹೋಗುತ್ತಿದೆ. ಲೋಕಸಭಾ ಚುನಾವಣೆವರೆಗೂ ಮೈತ್ರಿ ಸರ್ಕಾರ ಇರಬಹುದು ಅಷ್ಟೆ. ಅವರ ನಡೆ- ನುಡಿ ನೋಡಿದರೆ ಭವಿಷ್ಯ ಏನಾಗುತ್ತೆ ಅನ್ನೋದು ಗೊತ್ತಾಗುತ್ತಿಲ್ಲ. ಮೈತ್ರಿ ಮುಖಂಡರ ನಡುವೆ ಅಸಮಾಧಾನ ಹೆಚ್ಚಾಗಿದೆ ಅಂದರು.
ಮೇಕೆದಾಟು ವಿಚಾರವಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ತಮಿಳುನಾಡಿನವರು ಹಿಂದೆಯೂ ಈ ಕುರಿತು ವಿರೋಧ ಮಾಡಿದ್ದರು. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಕಾರ್ಯಗತ ಮಾಡಬೇಕು. ಕೇಂದ್ರದಲ್ಲಿ ತಮಿಳುನಾಡಿನವರಿಗಿಂತ ನಮ್ಮವರ ಧ್ವನಿ ಜಾಸ್ತಿಯಾಗಬೇಕು. ತಮಿಳುನಾಡಿನವರಿಗೆ ಸ್ವಲ್ಪಾನೂ ಬೆಲೆ ಇಲ್ಲ, ಇದರ ಬಗ್ಗೆ ಕಿಂಚಿತ್ತು ಅವರಿಗೆ ಶಕ್ತಿ ಇಲ್ಲ. ಅವರೇನಿದ್ದರೂ ಕಾವೇರಿ ಹೋರಾಟ ಮಾಡಬಹುದು ಅಷ್ಟೆ. ಮೇಕೆದಾಟು ಬಗ್ಗೆ ಮಾತಾನಾಡಲೂ ಅವರಿಗೆ ಅಧಿಕಾರ ಇಲ್ಲ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv