ಬೆಂಗಳೂರು: ಬಿಜೆಪಿ ಪರಿವರ್ತನಾ ಸಮಾವೇಶಕ್ಕೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಕನ್ನಡ ಪರ ಒಕ್ಕೂಟ ಸಂಘಟನೆಗಳ ಅಧ್ಯಕ್ಷ ವಾಟಾಳ್ ನಾಗರಾಜ್ರನ್ನು ವಶಕ್ಕೆ ಪಡೆಯುವ ವೇಳೆ ಚಿಕ್ಕ ಗಲಾಟೆಯೂ ನಡೆಯಿತು.
ಈ ಗಲಾಟೆಯಲ್ಲಿ ವಾಟಾಳ್ ನಾಗರಾಜ್ ಪೊಲೀಸ್ ಒಬ್ಬರ ಮೇಲೆ ಹಲ್ಲೆ ನಡೆಸಿದರು. ಹಲ್ಲೆಯ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಅಂದು ಚಡ್ಡಿ ಹಾಕುತ್ತಿದ್ದ ಪೊಲೀಸರನ್ನು ನೋಡಿ ವೀರೆಂದ್ರ ಪಾಟೀಲರಿಗೆ ಪ್ಯಾಂಟ್ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಆದ್ರೆ ಇಂದು ಪೊಲೀಸರು ನನಗೆ ಹೀಗೆ ಮಾಡಿದರಲ್ಲ, ನನ್ನ ಹೋರಾಟದಲ್ಲಿ ಇದೂವರೆಗೆ ಪೊಲೀಸರು ಈ ರೀತಿಯಾಗಿ ವರ್ತಿಸಿರಲಿಲ್ಲ. ನನಗೆ ಆ ವೇಳೆ ನೋವಾಗಿತ್ತು, ಕತ್ತಿಗೆ ಏಟು ಬಿದ್ದಿತ್ತು. ಹೋರಾಟಗಾರರನ್ನು ನಾಯಿ ರೀತಿ ದರ ದರನೇ ಎಳೆದು ಕೊಂಡು ಹೋಗಲಾಗಿದೆ. ನನ್ನ ಹೋರಾಟದ ಇತಿಹಾಸದಲ್ಲಿ ಪೊಲೀಸರಿಂದ ಕಿರಿಕ್ ಆಗಿರಲಿಲ್ಲ ಎಂದು ಭಾವುಕರಾದರು.
ಪ್ರಧಾನಿ ಮೋದಿ ಇಂದು ತಮ್ಮ ಭಾಷಣದಲ್ಲಿ ಮಹದಾಯಿ ವಿಚಾರವಾಗಿ ಮಾತನಾಡಬೇಕಿತ್ತು. ಇದು 2018ರ ಚುನಾವಣೆಗೆ ಬಿಜೆಪಿ ಅವರಿಗೆ ಮಾರಕವಾಗಲಿದೆ. ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲಾಗುತ್ತದೆ. ಇಂದು ಮಹದಾಯಿ ವಿಚಾರದಲ್ಲಿ ಪ್ರಧಾನಿಗಳು ಮಾತನಾಡಬೇಕಿತ್ತು. ಇದು ಅತ್ಯಂತ ದ್ರೋಹ, ಅನ್ಯಾಯ ಮತ್ತು ಕನ್ನಡ ನಾಡಿನ ಜನತೆಗೆ ಮಾಡಿರುವ ಮಹಾ ಮೋಸವಾಗಿದೆ. ಮೋದಿ ಅವರು ನಮಗೆ ನ್ಯಾಯ ಒದಗಿಸಲ್ಲ ಅಂದ್ರೆ ಪ್ರಧಾನಿಯಾಗಿ ನಮಗೆ ಏನು ಲಾಭ, ಪ್ರಧಾನಿಗಳು ದೇಶದ ಒಕ್ಕೂಟ ರಾಜ್ಯದಲ್ಲಿ ಎಲ್ಲರ ಪರವಾಗಿ ಒಂದೇ ನಿಲುವನ್ನು ಹೊಂದಬೇಕು. ಪ್ರಧಾನಿಗಳು ಕರ್ನಾಟಕವನ್ನು ತಬ್ಬಲಿಯ ರೀತಿಯಲ್ಲಿ ನೋಡುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸಮಗ್ರ ಕನ್ನಡಿಗರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶವನ್ನು ಹೊರ ಹಾಕಿದರು.