ರಾಮನಗರ: ಅರಣ್ಯದಲ್ಲೇ ವಾಸ ಮಾಡುತ್ತಿದ್ದ ಆದಿವಾಸಿ ಇರುಳಿಗರನ್ನು ಒಕ್ಕಲೆಬ್ಬಿಸಿ ಹಕ್ಕುಪತ್ರಗಳನ್ನು ನೀಡದೇ ಸತಾಯಿಸುತ್ತಿರುವ ಜಿಲ್ಲಾಡಳಿತ ಇದೀಗ ಯೇಸು ಪ್ರತಿಮೆಗೆ ಜಮೀನು ಮಂಜೂರು ಮಾಡಿರುವುದು ಯಾವ ನ್ಯಾಯ ಸ್ವಾಮೀ. ಪ್ರತಿಮೆ ನಿರ್ಮಾಣ ಮಾಡುವ ಬದಲು, ಅಲ್ಲಿನ ಮೂಲ ನಿವಾಸಿಗಳಾದ ವನವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬಹುದಾಗಿತ್ತು ಎಂದು ವನವಾಸಿ ಕಲ್ಯಾಣ ಸಮಿತಿಯ ಮುಖಂಡರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನವಾಸಿ ಕಲ್ಯಾಣ ಸಮಿತಿಯ ಮುಖಂಡ ಸತೀಶ್, ಮೂಲ ನಿವಾಸಿಗಳು ನಿವೇಶನ ಸೇರಿದಂತೆ ಹಕ್ಕು ಪತ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಈ ತನಕ ಅವರ ಕೂಗಿಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಆದರೆ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದಲೇ ಡಿಕೆಶಿ ಭೂಮಿ ಮಂಜೂರು ಮಾಡಿಸಿರುವುದು ಯಾವ ನ್ಯಾಯ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಕಳೆದ 12 ದಿನಗಳಿಂದ ಕನಕಪುರ ತಾಲೂಕಿನ ಮರಳವಾಡಿಯ ಸಮೀಪದಲ್ಲಿ ಹಕ್ಕುಪತ್ರಕ್ಕಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ವನವಾಸಿ ಇರುಳಿಗರು ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಸಕ ಶಿವಕುಮಾರ್ ಅವರಾಗಲೀ, ಸಂಸದ ಡಿ.ಕೆ.ಸುರೇಶ್ ಅವರಾಗಲಿ ಒಂದು ದಿನವೂ ಸ್ಥಳಕ್ಕೆ ಧಾವಿಸಿಲ್ಲ. ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ, ಆದರೆ ಪ್ರಯೋಜನವಾಗಿಲ್ಲ. ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಕಪಾಲ ಟ್ರಸ್ಟ್ಗೆ 10 ಎಕರೆ ಭೂಮಿ ನೀಡುವ ಜನಪ್ರತಿನಿಧಿಗಳು ಆದಿವಾಸಿಗಳು ಧರಣಿ ನಡೆಸುತ್ತಿದ್ದರು ಸ್ಥಳಕ್ಕೆ ಧಾವಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನತೆಗೆ ಹಕ್ಕು ಪತ್ರ ವಿತರಣೆ ಮಾಡಬೇಕಾಗಿದೆ. ಅದರಲ್ಲೂ ಕನಕಪುರ ತಾಲೂಕಿನಲ್ಲೇ 600ಕ್ಕೂ ಹೆಚ್ಚು ಮಂದಿ ಪಲಾನುಭವಿಗಳಿದ್ದಾರೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು. ಮೂಲ ನಿವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಅರಣ್ಯದಲ್ಲೇ ಹುಟ್ಟಿ ಬೆಳೆದ ಅರಣ್ಯವಾಸಿ, ಆದಿವಾಸಿ, ವನವಾಸಿಗಳು ಪ್ರತಿಭಟನೆ ನಡೆಸುತ್ತಿದ್ರು ಜಿಲ್ಲಾಡಳಿತ ಹಕ್ಕುಪತ್ರ ನೀಡುವ ಕೆಲಸ ಮಾಡಿಲ್ಲ. ಮಾಜಿ ಸಚಿವ ಡಿಕೆಶಿ ಆದಿವಾಸಿಗಳ ಕಡೆಗೆ ಗಮನ ಹರಿಸಿಲ್ಲ. ಆದರೆ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಮೊದಲು ಆದಿವಾದಿಗಳಿಗೆ ಹಕ್ಕಪತ್ರ ನೀಡುವಂತೆ ಒತ್ತಾಯಿಸಿದರು.