ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ (Karnataka Maharshi Valmiki Scheduled Tribe Development Corporation Ltd) ಪ್ರಕರಣದಲ್ಲಿ ವೈದ್ಯಕೀಯ ಸಚಿವ ಕಚೇರಿ ಎಂದು ಹೇಳಿದ್ದಾರೆಯೇ ಹೊರತು ನನ್ನ ಹೆಸರು ಹೇಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ (Sharana Prakash Patil) ಸ್ಪಷ್ಟನೆ ನೀಡಿದ್ದಾರೆ.
ಹಗರಣದಲ್ಲಿ ತಮ್ಮ ಹೆಸರು ಥಳಕು ಹಾಕಿಕೊಂಡಿರುವುದರ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮೇ 26 ರಂದು ನಾನು ಕಚೇರಿಗೆ ಹೋಗಿಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಾನು ಕಚೇರಿಗೆ ಹೋಗಿರಲಿಲ್ಲ. ಕಚೇರಿಯಲ್ಲಿ ಸಭೆ ನಡೆದಿದೆ ಅಂದ್ರೆ ತನಿಖೆಯಾಗಲಿ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವರು ಅಂತ ಹೇಳಿಲ್ಲ, ಕಚೇರಿ ಎಂದು ಹೇಳಿದ್ದಾರೆ. ಸಚಿವರ ಕಚೇರಿ ಅಂದ್ರೆ ಶಾಸಕರು ಬರುತ್ತಾರೆ, ಹೋಗ್ತಾರೆ. ಆದರೆ ಆವತ್ತು ನಾನು ಕಚೇರಿಗೆ ಹೋಗಿಲ್ಲ. ಸತ್ಯ ಏನು ಅಂತ ಸಿಸಿ ಕ್ಯಾಮೆರಾ ನೋಡಿದ್ರೆ ಗೊತ್ತಾಗುತ್ತೆ. ನನಗೆ ಸಂಬಂಧವೇ ಇಲ್ಲ ಅಂದಮೇಲೆ ನನ್ನ ರಾಜೀನಾಮೆ ಕೇಳಿದ್ರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಕಚೇರಿ ಸಿಬ್ಬಂದಿಯನ್ನು ಕೇಳಿದಾಗ ಯಾವ ಸಭೆಯೂ ನಡೆದಿಲ್ಲ ಅಂದ್ರು. ವಿಚಾರಣೆಗೆ ಬನ್ನಿ ಅಂದ್ರೆ ಅಟೆಂಡ್ ಮಾಡ್ತೀನಿ. ನಾನು ಪ್ರಮಾಣಿಕವಾಗಿ ಕೆಲಸ ಮಾಡೋನು. ಈ ರೀತಿ ನಾನು ಮಾಡುವವನಲ್ಲ. ನನ್ನ ಕಚೇರಿಯಲ್ಲಿ ಮೀಟಿಂಗ್ ಆಗಿದ್ದರೆ ಕ್ರಮ ತಗೊಳ್ಳಿ. ಆದರೆ ಇದರಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ ಎಂದು ಶರಣಪ್ರಕಾಶ್ ಪಾಟೀಲ್ ಸ್ಪಷ್ಟನೆ ಕೊಟ್ಟರು.
ನನ್ನ ಹೆಸರು ಯಾಕೆ ಬಂದಿದೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಯಾರು ಯಾವ ತನಿಖೆ ಬೇಕಾದ್ರೂ ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: Exclusive: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧ- ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್
ಇತ್ತ ಸಚಿವರ ಹೆಸರು ಕೇಳಿ ಬಂದಿರುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ತನಿಖೆ ನಡೆಯುವಾಗ ಕೆಲವರ ಹೆಸರುಗಳು ಬರುತ್ತವೆ. ತನಿಖೆ ವೇಳೆ ಮಾತಾಡೋದು ಸರಿಯಲ್ಲ ಎಂದರು. ಇತ್ತ ಎಂಬಿ ಪಾಟೀಲ್ ಪ್ರತಿಕ್ರಿಯಿಸಿ, ಶರಣ ಪ್ರಕಾಶ್ ಪಾಟೀಲ್ ಅಪ್ಪಟ ಪ್ರಾಮಾಣಿಕ ವ್ಯಕ್ತಿ ಎಂದು ಬಣ್ಣಿಸಿದರು.