ಅಂದು ನಿನಗಾಗಿ ನಾನು ಯಾರಿಗೂ ಗೊತ್ತಾಗದಂತೆ ಒಬ್ಬನೇ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ತರುತ್ತಿದ್ದೆ. ಕಲ್ಲು-ಮುಳ್ಳೆನ್ನದೇ ಕೇರಿಯ ಮೇಲೆ ನಡೆದು ಬಂದಿದ್ದೆ. ನಿನಗೆ ಪ್ರಶ್ನೆಪತ್ರಿಕೆ ಕೊಡಬೇಕೆಂದು ನಿಮ್ಮ ಮನೆಯ ಬಾಗಿಲ ಬಳಿ ನಿಂತಿದ್ದೆ. ನೀನು ಆಗ ತಾನೆ ಸ್ನಾನ ಮುಗಿಸಿ ಕೇಶವನ್ನು ಕೆದರಿಕೊಂಡು ಸಿಕ್ಕು ಬಿಡಿಸುತ್ತಾ ಈಚೆಗೆ ಬರುತ್ತಿದ್ದೆ, ಬಾಗಿಲಲ್ಲಿ ನಿಂತಿದ್ದ ನನ್ನನ್ನು ಕಂಡು ಅಲ್ಲೇ ನಾಚಿ ನೀರಾದೆ.
ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಿದ್ದೆವು. ಆಗ ಬಿಂದಿಗೆ ಹೊತ್ತು, ನಾಜೂಕಾಗಿ ನೀರು ತರುತ್ತಿದ್ದ ನಿನ್ನ ಅಮ್ಮ ಬಿಸಿಲಿನ ತಾಪಕ್ಕೆ ಬಾಡಿದ ನನ್ನ ಮುಖವನ್ನು ಕಂಡು ಅವನಿಗೊಂದು ತಂಬಿಗೆ ನೀರುಕೊಡು ಸುಂಡಿಹೋಗಿದ್ದಾನೆ ಅಂದುಬಿಟ್ರು. ಅಷ್ಟರಲ್ಲಿ ಬಿಸಿ ನೀರಿಗೆ ಮೈತಾಕಿಸಿ ಆಗತಾನೆ ಬಂದಿದ್ದ, ನಿನ್ನಂದ ನೋಡುತ್ತ ನನ್ನ ಮೈ ತೊಯ್ದುಹೋಗಿತ್ತು. ನೀರು ಕುಡಿದು, ಪ್ರಶ್ನೆಪತ್ರಿಕೆ ನಿನಗೆ ನೀಡಿ ನಾನು ಹೊರಟು ನಿಂತಾಗ ದೊಡ್ಡಮ್ಮ ಕೇಳಿದರು, ‘ಏನೋ ಹುಡುಗ ನಮ್ಮ ಹುಡುಗಿ ಹೇಗೆ?’ ಎಂದು, ನನಗೆ ಬಾಯಿಗೆ ಬೀಗ ಬಿಗಿದಂತಾಯ್ತು.

ಆದರೆ, ಹುಡುಗಿ ಆ ನಿನ್ನ ಕಳ್ಳ ಮರೆವಿಗೆ ನೆನಪಿಸುತ್ತಿದ್ದೇನೆ ನೋಡು, ಅಂದೊಂದು ದಿನ ಎಳನೀರಿನ ತೋಟಕ್ಕೆ ಕರೆದೊಯ್ದೆಯಲ್ಲ, ಆಗ ಮಾಲಿಯ ಸಹಾಯದಿಂದ ಹುಡುಕಿಸಿ ಎಳೆ ಗಂಜಿ ಇರುವ ಎಳನೀರನ್ನು ತಂದು ಕುಡಿಯಲು ಕೊಟ್ಟೆ. ನಾನು ಕುಡಿಯುವಾಗ ಎಳೆ ಗಂಜಿಯ ತುಂಡು ತುಟಿಯಂಚಿನಲ್ಲಿ ಅಂಟಿಕೊಂಡಿತ್ತು. ಆಗ ನೀನು ಮಾಡಿದ್ದೇನು! ನೆನಪಾಯಿತೇ ಆ ಕಳ್ಳ ಮರೆವು ಹೇಳು?
ನನ್ನ ತುಟಿಗೆ ನಿನ್ನ ಕೆಂದುಟಿ ಸೇರಿಸಿದೆ, ಸಿಹಿ ಎಳನೀರಿಗೆ ಜೇನು ಬೆರಸಿದಂತೆ. ಆ ರೋಮಾಂಚನ ಕ್ಷಣ ಕಳೆದ ಅರೆಗಳಿಗೆಯಲ್ಲೇ ನಾನು ಸಿಡುಕಿದೆ. ತಕ್ಷಣವೇ ನೀನು ‘ನಾನು ಮುತ್ತು ಕೊಟ್ಟಿದ್ದು ನಿನಗಲ್ಲ ಆ ಗಂಜಿಯ ತುಂಡಿಗೆ’ ಎಂದು ಕಳ್ಳನೆಪ ಹೇಳಿ ಮಳ್ಳಿಯಂತೆ ಸುಮ್ಮನಾದೆ. ನನ್ನನ್ನು ಮತ್ತಷ್ಟು ಇಂಪ್ರೆಸ್ ಮಾಡಲು ಸಿನಿಮಾದ ಹಾಡೊಂದನ್ನು ಹಾಡುತ್ತಿದ್ದೆ. ನೀನು ಕೋಗಿಲೆಯಂತೆ ಹಾಡುತ್ತಿದ್ದಿ ಎಂದು ಹೇಳಿಬಿಟ್ಟರೆ ಮುತ್ತಿನ ಮಳೆಯನ್ನೇ ಕರೆದುಬಿಡುವೆಯೇನೋ ಎಂದು ಸಿಡುಕಿ ಮತ್ತಷ್ಟು ಮುನಿಸಾಗಿಸಿಕೊಂಡೆ.

ಅಷ್ಟಕ್ಕೇ ನಾನು ಸುಮ್ಮನಾದೆನಾ ಯಾರದ್ದೊ ತೋಟದಿಂದ ಕದ್ದು ತಂದಿದ್ದ ಹಸಿ-ಹಸಿಯಾದ ಮುಸುಕಿನ ಜೋಳಕ್ಕೆ ಕಿಚ್ಚು ಹೊತ್ತಿಸಿ, ಸುಲಿಯದೆಯೇ ಸುಟ್ಟು ಕೊಟ್ಟೆ. ಸಿನಿಮಾಗಳಲ್ಲಿ ಪ್ರೇಮಿಗಳು ಅನುಭವಿಸುವ ಆ ಸನ್ನಿವೇಶ ನನಸಾಗಿ ನನಗೆ ಕಂಡಿತು. ಜೋಳ ಹೆಚ್ಚಾಗಿ ತುಟಿ ಸುಡುವಷ್ಟು ಬಿಸಿ ಇದ್ದರಿಂದ ನಿನ್ನ ತುಟಿ ಮತ್ತೂ ಕೆಂಪೇರಿತ್ತು. ನಾನು ‘ಬಿಸಿಯಾಯಿತೇ’ ಎಂದ ಕೂಡಲೇ ನೀನು ಮೆಲ್ಲನೆ ‘ಹೂಂ’ ಎಂದೆ. ‘ನನ್ನ ತುಟ್ಟಿಯಿಂದ ತಂಪು ಮಾಡಲೇ’ ಎನ್ನುತ್ತಿದ್ದಂತೆ, ನೀನು ‘ಗಾಳಿ ತಣ್ಣಗಿದೆ. ಅದು ತಣ್ಣಗೆ ಮಾಡುತ್ತದೆ’ ಎಂದು ಮುಗುಳ್ಳಕ್ಕೆ.
ಸಂಜೆ ಗತ್ತಲಿನಲ್ಲಿ ಫಳ್ಳನೆ ಹೊಳೆಯುತ್ತಿದ್ದ ನಿನ್ನ ಮುಖದ ಕಾಂತಿ ಕಂಡು ಚಂದ್ರಕಾಂತಿಯಂತೆ ಇದೆ ಎಂದು ಹೇಳಲೆ? ಹೇಳುವ ಬದಲು ಅವಳಿಗೆ ಸಿಹಿ ಮತ್ತೊಂದನ್ನು ನೀಡಲೇ ಅನಿಸಿತ್ತು. ಮನಸ್ಸು ಬಾ ಅಪ್ಪಿಕೋ ಎಂದಿತು. ಹೃದಯದ ಒಳಮಾತು ಅವಳಿಗೆ ಕೇಳಿಸಲಿಲ್ಲ. ಸವಿಸಂಜೆಯಲ್ಲಿ ಮನೆಗೆ ಸಾಗುವ ವೇಳೆ ಯಾವುದೋ ಗೀತೆಯನ್ನು ಅದೆಷ್ಟು ಸಾಧ್ಯವೋ ಅಷ್ಟು ಕೆಟ್ಡದ್ದಾಗಿ ಹಾಡ್ತಿದ್ದೆ, ಅದನ್ನ ಸಹಿಸಲಾಗದಿದ್ರೂ ನಿನಗಾಗಿ ನಾನು ಕಕ್ಕಾಬಿಕ್ಕಿಯಾಗಿ ನಕ್ಕುಬಿಟ್ಟೆ, ಆಗ ನಿನ್ನ ಮುಖ ಮತ್ತುಷ್ಟು ಕೆಂಪೇರಿದ್ದನ್ನು ಕಂಡು ನಗು ಬಿಗಿ ಹಿಡಿದೆ. ಪ್ರೇಮ ಕುರುಡು ಅಂತ ನನರ್ಥವಾಗಿದ್ದು ಆಗಲೇ….

ಆಗಲಾದ್ರು ಸುಮ್ಮನಾದೆಯಾ, ‘ಪ್ರೇಮಿಗಳು ಕೃತಿಚೌರ್ಯರು, ಅವರಿಗೆ ಆಕಾಶ ಭೂಮಿ ಎಲ್ಲವೂ ಮೀಸಲು ಎಂದು ಸಮರ್ಥಿಸಿಕೊಂಡೆ.
ಅಷ್ಟೊತ್ತಿಗೆ ಕಿಲೋಮಿಟರ್ ದೂರದಿಂದಲೇ ನಿನ್ನಮ್ಮ ಕೂಗಿಕೊಂಡು ಬರುತ್ತಿದ್ದುದ್ದನ್ನ ದಿಟ್ಟಿಸಿದ ನೀನು ‘ಇಷ್ಟು ಬೇಗ ಸಮಯವಾಯಿತೇ?’ ಎನ್ನುತ್ತಲೇ ಮುಗುಳುನಗೆ ಬೀರಿ ಹೊರಟೆ. ಬೇರೆ ದಾರಿಯಿಲ್ಲದೇ ನಾನು ಅಲ್ಲಿಂದ ಕಾಲ್ಕಿತ್ತೆ.
ಮಾತಿನಲ್ಲಿ ಹೇಳಲಾಗದ್ದನ್ನು ಪ್ರೇಮದ ಕರೆಯೋಲೆಯಲ್ಲಿ ತಿಳಿಸುತ್ತಿದ್ದೇನೆ. ‘ಹುಡುಗಿ ನೀ ಮತ್ತೆ ಸಿಗುವೆಯ’ ಎಂದು ಮನಸ್ಸಿನಲ್ಲಿ ಹೇಳಿಕೊಂಡೆ.
- ಮೋಹನ ಬನ್ನಿಕುಪ್ಪೆ

