ಗಾಂಧಿನಗರ: ಪಾನಿಪುರಿ ಮಾರಾಟ ಮಾಡದಂತೆ ಗುಜರಾತಿನ ವಡೋದರಾದ ಮುನ್ಸಿಪಲ್ ಕಾರ್ಪೋರೇಷನ್ ಆದೇಶ ಹೊರಡಿಸಿದೆ.
ಸ್ಥಳೀಯರ ಆರೋಗ್ಯ ದೃಷ್ಟಿಯಿಂದ ಇಂತಹದೊಂದು ನಿರ್ಧಾರವನ್ನು ವಡೋದರಾ ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡಿದೆ. ಆದೇಶವನ್ನು ಮೀರಿ ಅಕ್ರಮವಾಗಿ ಪಾನಿ ತಯಾರಿಸುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿ ಅವರಿಂದ ತ್ಯಾಜ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮುಂಗಾರು ಸಮಯದಲ್ಲಿ ಪಾನಿಪುರಿ ಪ್ರಿಯರ ದಂಡು ರಸ್ತೆ ಬದಿಯ ಮಳಿಗೆಗಳಲ್ಲಿ ಬೇಲ್ಪುರಿ, ಪಾನಿಪುರಿ ತಿನ್ನಲು ಸರದಿಯಲ್ಲಿ ನಿಂತಿರುತ್ತಾರೆ. ಹೀಗಾಗಿ ಪಾನಿಪುರಿ ಸೇವನೆ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ವಡೋದರಾ ಸ್ಥಳೀಯ ನಿವಾಸಿಗಳು ಕಳೆದ ಕೆಲವು ದಿನಗಳಿಂದ ಟೈಫಾಯಿಡ್, ಜಾಂಡಿಸ್ ಹಾಗೂ ಫುಡ್ ಪಾಯಿಸನ್ಗೆ ತುತ್ತಾಗಿದ್ದರು. ಇದಕ್ಕೆ ಪಾನಿಪುರಿ ಸೇವನೆಯೇ ಕಾರಣ ಎಂದು ಅರಿತ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಹಾಗೂ ಸದಸ್ಯರು ಪಾನಿಪುರಿ ಮಾರಾಟಕ್ಕೆ ತಡೆ ಹಾಕಿದ್ದಾರೆ.
ನಗರದಲ್ಲಿ ಪಾನಿಪುರಿ ತಯಾರಿಸುತ್ತಿದ್ದ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಶಾಕಿಂಗ್ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ಹಾಳಾದ ಹಿಟ್ಟು, ಕಂದುಬಣ್ಣದ ಅಡುಗೆ ಎಣ್ಣೆ, ಕೊಳೆತ ಆಲೂಗಡ್ಡೆ ಕೊಳಚೆ ನೀರು ಸೇರಿದಂತೆ ಸಾವಿರಾರು ಕೆಜಿ ಸಾಮಗ್ರಿಗಳನ್ನು ವಶಕ್ಕೆ ಪಡೆದು ನಗರದ ಹೊರವಲಯದಲ್ಲಿ ಪಾಲಿಕೆ ಬೀಸಾಡಿದೆ.
ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ವಡೋದಾರದಲ್ಲಿ ಪಾನಿಪುರಿ ತಯಾರಿಸುತ್ತಿದ್ದ 50 ತಯಾರಿಕಾ ಮಳಿಗೆಗಳ ಮೇಲೆ ದಾಳಿ ಮಾಡಿದ್ದವು. ಇದರಿಂದಾಗಿ 4 ಸಾವಿರ ಕೆಜಿ ಪುರಿ, 3.5 ಸಾವಿರ ಕೆಜಿ ಆಲೂಗಡ್ಡೆ ಹಾಗೂ 1.2 ಸಾವಿರ ಲೀಟರ್ ಆಮ್ಲೀಯ ನೀರು (ಆಸಿಡಿಕ್ ವಾಟರ್) ವಶಪಡಿಸಿಕೊಳ್ಳಲಾಗಿದೆ.