ಶಿವಮೊಗ್ಗ: ವಧುವರರ ಸಮಾವೇಶಕ್ಕೆ ವಧುಗಳು ಆಗಮಿಸದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವರನ ಕಡೆಯವರು ಆಯೋಜಕರ ಜೊತೆ ಜಟಾಪಟಿ ಮಾಡಿಕೊಂಡ ಘಟನೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಸಪ್ತಪದಿ ಬ್ರಾಹ್ಮಣ ವಧು-ವರರ ವಿವಾಹ ವೇದಿಕೆ ಭಾನುವಾರ ರಾಜ್ಯ ಮಟ್ಟದ ವಧು-ವರರ ಪ್ರಥಮ ಮುಖಾಮುಖಿ ಸಮಾವೇಶವನ್ನು ಆಯೋಜಿಸಿತ್ತು. ವಧುವನ್ನು ಹುಡುಕಿಕೊಂಡು ಈ ಸಮಾವೇಶಕ್ಕೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ 200ಕ್ಕೂ ಹೆಚ್ಚು ಮಂದಿ ಯುವಕರು ಆಗಮಿಸಿದ್ದರು. ಆದರೆ ಸಮಾವೇಶದಲ್ಲಿ 8 ಜನ ವಧುಗಳು ಮಾತ್ರ ಭಾಗವಹಿಸಿದ್ದಕ್ಕೆ ಸಂಘಟಕರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.
ಮುಂಗಡವಾಗಿ ನೋಂದಣಿ ಮಾಡಿಸಿದ್ದ ಯುವಕರು ತಲಾ 3 ಸಾವಿರ ರೂ., 5 ಸಾವಿರ ರೂ. ಪಾವತಿಸಿದ್ದರು. ಹಣ ಪಡೆದು ಕೇವಲ 8 ಜನ ವಧುಗಳನ್ನು ಕರೆಸಿದ್ದಾರೆ ಎಂದು ಸಮಾವೇಶ ಆಯೋಜಿಸಿದ್ದ ಬ್ರಾಹ್ಮಣ ವಧು-ವರರ ವೇದಿಕೆಯ ವ್ಯವಸ್ಥಾಪಕಿ ಶ್ರೀವಿದ್ಯಾ ಅವರನ್ನು ಯುವಕರು ಹಾಗೂ ಕುಟುಂಬಸ್ಥರು ತರಾಟೆಗೆ ತಗೆದುಕೊಂಡರು.
ದೈವಜ್ಞ ಕಲ್ಯಾಣ ಕಲ್ಯಾಣ ಮಂಟಪಲ್ಲಿ ಭಾರೀ ಗದ್ದಲ ಉಂಟಾದ ಮಾಹಿತಿ ಪಡೆದು ದೊಡ್ಡಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಯುವಕರ ಕುಟುಂಬಸ್ಥರು ಹಾಗೂ ಸಮಾವೇಶ ಆಯೋಜಕರ ನಡುವೆ ಸಂಧಾನ ನಡೆಸಿ, ಪಾವತಿಸಿದ್ದ ಹಣವನ್ನು ಮರಳಿಸುವಂತೆ ಪೊಲೀಸರು ಸೂಚಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv