ರಾಮನಗರ: ನಾನು ಹೆಚ್.ಡಿ.ದೇವೇಗೌಡರ (H.D Devegowda) ಗರಡಿಯಲ್ಲಿ ಬೆಳೆದವನು. ದೇವೇಗೌಡರು ಸುಳ್ಳುಹೇಳ್ತಾರೆ ಅಂದ್ರೆ ನಾನು ಸುಳ್ಳು ಹೇಳ್ತಿನಿ ಅಂತ ಅರ್ಥ ಎಂದು ಸಚಿವ ವಿ.ಸೋಮಣ್ಣ (V.Somanna) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣ ತಾಲೂಕಿಗೆ 3 ಸಾವಿರ ಮನೆ ಮಂಜೂರು ಮಾಡಿದ ವಿಚಾರ ಸಂಬಂಧ ವಸತಿ ಸಚಿವ ಸುಳ್ಳು ಸೋಮಣ್ಣ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕನಕಪುರದ ಬಿಳಿದಾಳೆ ಗ್ರಾಮದಲ್ಲಿ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಮನೆ ಹಾನಿಯಾಗಿದೆ. ಈ ಕುರಿತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪತ್ರ ಬರೆದಿದ್ದರು. ಹಾಗಾಗಿ ವಸತಿ ಇಲಾಖೆ ಮನೆ ಮಂಜೂರು ಮಾಡಿದೆ. ನಾನು ಈಗಾಗಲೇ ಚನ್ನಪಟ್ಟಣಕ್ಕೆ ಸಾಕಷ್ಟು ಮನೆಗಳನ್ನು ಕೊಟ್ಟಿದ್ದೇನೆ. ಇನ್ನೂ ಕೊಡ್ತೇನೆ. ಆದರೆ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು, ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಂಜಾರ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ: ಪಿ. ರಾಜೀವ್
ನಾನು ಕುಮಾರಸ್ವಾಮಿ ಮುಖ ನೋಡಿ ಮಾತನಾಡಲ್ಲ. ನಮ್ಮನ್ನು ಬೆಳೆಸಿದವರು ದೇವೇಗೌಡರು. ನಾನು ಸಂಸ್ಕಾರದಿಂದ ಬಂದಿದ್ದೇನೆ. ಸಂಸ್ಕಾರದಿಂದ ಇದ್ದೇನೆ. ಕುಮಾರಸ್ವಾಮಿ ನಾಲಿಗೆ ಬಿಗಿಹಿಡಿದು ಮಾತನಾಡಲಿ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಸ್ವಲ್ಪ ಗಾಂಭೀರ್ಯದಿಂದ ನಡೆದುಕೊಳ್ಳಲಿ. ಮಾಜಿ ಸಿಎಂ ಅಗಿದ್ದ ಕುಮಾರಸ್ವಾಮಿ ತಮ್ಮ ಪೂರ್ವಾಗ್ರಹ ನೋಡಿಕೊಳ್ಳಲಿ. ನಾನು ದೇವೇಗೌಡರು, ಚೆನ್ನಮ್ಮರನ್ನು ನೋಡಿ ಬೆಳೆದವನು. ದೇವೇಗೌಡರ ಮಗನಾಗಿ ಯಾವ ರೀತಿ ಮಾತನಾಡಬೇಕು ಎಂದು ಅರಿತು ಮಾತನಾಡಿದರೆ, ಅವರಿಗೆ ಒಳ್ಳೆಯದು ಎಂದು ಹೆಚ್ಡಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ: ಗಾಂಧಿ ಮರಿ ಮೊಮ್ಮಗನ ಸ್ಫೋಟಕ ಹೇಳಿಕೆ