ಲಕ್ನೋ: ಮದುವೆಯ ಪೂಜಾ ಕಾರ್ಯದಲ್ಲಿ ತೊಡಗಿದ್ದ ವರನ ಎದೆಗೆ ಗುಂಡು ಹಾರಿಸಿರುವ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಕೆರಿ ಜಿಲ್ಲೆಯ ರಾಮಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸುನಿಲ್ ವರ್ಮ ಮೃತಪಟ್ಟ ವರ. ವರ ಸುನಿಲ್ ಅರ್ಚಕರು ಹೇಳಿದಂತೆ ಪೂಜಾಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ವರನ ಸುತ್ತಲೂ ಸಂಬಂಧಿಕರು, ಗೆಳೆಯರು ನೆರೆದು ಮದುವೆ ಶಾಸ್ತ್ರವನ್ನು ನೋಡ್ತಿದ್ದರು. ಸಂಬಂಧಿಕರ ಮಧ್ಯೆದಲ್ಲಿಯೇ ನಿಂತಿದ್ದ ರಾಮಚಂದ್ರ ಎಂಬಾತ ಪ್ಯಾಂಟ್ ಜೇಬಿನಿಂದ ಪಿಸ್ತೂಲ್ ಹೊರ ತೆಗೆದು ನೇರವಾಗಿ ವರನ ಎದೆಗೆ ಗುಂಡು ಹಾರಿಸಿದ್ದಾನೆ.
ಗುಂಡು ತಗುಲಿದ ಕೂಡಲೇ ಜ್ಞಾನ ತಪ್ಪಿದ ವರನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುನಿಲ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಬಳಿಕ ಆರೋಪಿ ರಾಮಚಂದ್ರ ಪರಾರಿಯಾಗಿದ್ದಾನೆ. ವರನ ಎದೆಗೆ ಗುಂಡು ಹಾರಿಸುವ ಎಲ್ಲ ದೃಶ್ಯಗಳು ಮದುವೆ ವಿಡಿಯೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಘಟನೆ ಸಂಬಂಧ ಆರೋಪಿ ರಾಮಚಂದ್ರ ವಿರುದ್ಧ ಐಪಿಸಿ ಸೆಕ್ಷನ್ 302ರ ಪ್ರಕಾರ ದಾಖಲಾಗಿದೆ. ಆರೋಪಿ ರಾಮಚಂದ್ರ ಸಂಭ್ರಮಾಚರಣೆಗಾಗಿ ಗುಂಡು ಹಾರಿಸುವಾಗ ಆಕಸ್ಮಿಕವಾಗಿ ವರನಿಗೆ ತಗುಲಿದೆಯಾ ಅಥವಾ ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂಬುದು ತನಿಖೆಯಲ್ಲಿ ತಿಳಿಯಬೇಕಿದೆ. ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವುದಕ್ಕೆ ನಿಷೇಧವಿದ್ದು, ಆದ್ರೂ ಕೆಲವರು ಫೈರಿಂಗ್ ಮಾಡ್ತಾರೆ. ತಪ್ಪಿಸ್ಥತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಎಎಸ್ಪಿ ಘನಶ್ಯಾಮ್ ಚೌರಾಶಿ ಹೇಳಿದ್ದಾರೆ.
ಈ ಸಂಬಂಧ ನೀಮ್ಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.