ಕೋಲಾರ: ಅದು ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ, ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮ. ಆದರೆ ಅಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್ಎನ್ ನಾರಾಯಣಸ್ವಾಮಿ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಟಾಪಟಿ ಕೆಲಕಾಲ ಅಲ್ಲೋಕ ಕಲ್ಲೋಲ ಸೃಷ್ಟಿ ಮಾಡಿದೆ.
ಜನತಾ ದರ್ಶನ ವೇದಿಕೆ ಮೇಲೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಜಟಾಪಟಿ ನಡೆದಿದೆ. ಸಂಸದ ಮುನಿಸ್ವಾಮಿಯನ್ನು ಹಿಡಿದು ವೇದಿಕೆಯಿಂದ ಕರೆದೊಯ್ಯುತ್ತಿರುವ ಎಸ್ಪಿ ನಾರಾಯಣ್, ಇನ್ನೊಂದೆಡೆ ವೇದಿಕೆ ಎದುರು ಕುಳಿತಿರುವ ಜನರಿಗೆ ಪುಕ್ಕಟ್ಟೆ ಮನೋರಂಜನೆ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ.
ಸೋಮವಾರ ಸರ್ಕಾರದ ಕಾರ್ಯಕ್ರಮ ಜನತಾ ದರ್ಶನವನ್ನು ನಗರದ ಟಿ ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಆಯೋಜನೆ ಮಾಡಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ನಡುವೆ ಕಾರ್ಯಕ್ರಮ ಆರಂಭವಾದ ನಂತರ ಸಂಸದ ಮುನಿಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಿದರು. ಕಾರ್ಯಕ್ರಮದಲ್ಲಿ ಕೆಲಕಾಲ ಇದ್ದು ವಾಪಸ್ ಹೋಗುವ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಸಚಿವ ಭೈರತಿ ಸುರೇಶ್ ಪಕ್ಕದಲ್ಲಿ ಕುಳಿತಿದ್ದ ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರನ್ನು ನೋಡಿಕೊಂಡು ಎಲ್ಲಾ ಭೂಗಳ್ಳರನ್ನು ಅಕ್ಕಪಕ್ಕ ಕುಳಿಸಿಕೊಂಡು ಜನತಾ ದರ್ಶನ ಮಾಡ್ತಾ ಇದ್ದಾರೆ ಎಂದರು. ಈ ವೇಳೆ ಕ್ಷಣಾರ್ಧದಲ್ಲಿ ಆಕ್ರೋಶಗೊಂಡ ಎಸ್ಎನ್ ನಾರಾಯಣಸ್ವಾಮಿ ಸಂಸದರಿಗೆ ಏಕವಚನದಲ್ಲಿ ಬೈಯಲು ಶುರು ಮಾಡಿಕೊಂಡರು.
ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಸಂಸದ ಮುನಿಸ್ವಾಮಿಯನ್ನು ತಬ್ಬಿಕೊಂಡ ಕೋಲಾರ ಎಸ್ಪಿ ನಾರಾಯಣ ಸಂಸದರನ್ನು ಹಿಡಿದುಕೊಂಡು ವೇದಿಕೆಯಿಂದ ಹೊರಗೆ ಕರೆದುಕೊಂಡು ಹೋದರು. ಈ ಸಂದರ್ಭ ಸಾಕಷ್ಟು ತಳ್ಳಾಟ ನೂಕಾಟ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸಚಿವ ಸುರೇಶ್ ಮಧ್ಯ ಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರಾದರೂ ಪ್ರಯೋಜನೆವಾಗಿಲ್ಲ.
ಕೆಲ ಹೊತ್ತಿನ ನಂತರ ಮತ್ತೆ ಸಂಸದ ಮುನಿಸ್ವಾಮಿ ವೇದಿಕೆ ಮೇಲೆ ಬಂದು ಸಚಿವ ಸುರೇಶ್ ಎದುರು ತಮ್ಮ ಅಹವಾಲು ಹೇಳಿದರು. ಬಳಿಕ ಮಾತನಾಡಿದ ಸಂಸದ ಮುನಿಸ್ವಾಮಿ ಶಾಸಕ ನಾರಾಯಣಸ್ವಾಮಿ ಒಬ್ಬ ಭೂ ಗಳ್ಳ ಎಂದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ ವೇದಿಕೆಯಲ್ಲಿ ಸಚಿವರ ಪಕ್ಕದಲ್ಲೇ ಇದ್ದ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ಕೂಡಾ ತನ್ನ ಆಕ್ರೋಶ ಹೊರಹಾಕಿದರು. ನಾನು ಯಾವುದೇ ಒಂದೇ ಒಂದು ಇಂಚು ಭೂಮಿಯನ್ನು ಒತ್ತುವರಿ ಮಾಡಿಲ್ಲ, ಕಬಳಿಕೆ ಮಾಡಿಲ್ಲ. ನನ್ನ ಮೇಲೆ ರಾಜಕೀಯವಾಗಿ ಸುಳ್ಳು ಕೇಸುಗಳನ್ನು ಹಾಕಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ
ನಾನು ಒಂದೇ ಒಂದು ಸರ್ಕಾರಿ ಭೂಮಿ ಕಬಳಿಕೆ ಮಾಡಿರುವುದನ್ನು, ಕೆರೆಯಲ್ಲಿ ಬಡಾವಣೆ ಮಾಡಿರುವುದನ್ನು ಸಾಬೀತು ಮಾಡಿದರೆ ನಾನು ರಾಜಕೀಯವನ್ನು ಬಿಟ್ಟು ಸಂಸದ ಮುನಿಸ್ವಾಮಿ ಮನೆಯಲ್ಲಿ ಕೆಲಸಕ್ಕಿರುತ್ತೇನೆ ಎಂದು ಈಗಾಗಲೇ ಹೇಳಿದ್ದೆ. ಅದರಂತೆ ಅವರು ಕೂಡಾ ತನ್ನ ಮನೆಯ ವಾಚ್ ಮೆನ್ ಕೆಲಸ ಮಾಡೋದಾಗಿ ಹೇಳಿದ್ದರು. ಈಗಲೂ ಹೇಳುತ್ತಿದ್ದೇನೆ ಅವರು ನನ್ನ ಮೇಲಿನ ಆರೋಪ ಸಾಬೀತು ಮಾಡಿಲ್ಲ. ಹೀಗಾಗಿ ಬಂದು ನನ್ನ ಮನೆ ವಾಚ್ ಮೆನ್ ಕೆಲಸ ಮಾಡಲಿ ಎಂದರು.
ಉಸ್ತುವಾರಿ ಸಚಿವ ಬೈರತಿ ಸುರೇಶ್ ಕೂಡಾ ವೇದಿಕೆಯಲ್ಲಿ ನಡೆದ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿ ಸಂಸದ ಮುನಿಸ್ವಾಮಿ ಕೂಡಾ ನನ್ನ ಸ್ನೇಹಿತ ಅವನಿಗೂ ಶಾಸಕ ನಾರಾಯಣಸ್ವಾಮಿ ಇಬ್ಬರಿಗೂ ಬುದ್ದಿ ಹೇಳಿದ್ದೇನೆ. ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ವೇದಿಕೆ ಕಾರ್ಯಕ್ರಮದಲ್ಲಿ ವೈಯಕ್ತಿಕ ವಿಚಾರಗಳನ್ನು ತರಬಾರದು. ಅಲ್ಲದೆ ಅವರ ಆಸ್ತಿ ಇವರು ನುಂಗಿಲ್ಲ ಇವರ ಆಸ್ತಿ ಅವರು ನುಂಗಿಲ್ಲ. ವಿನಾಕಾರಣ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಜನತಾ ದರ್ಶನ ಕಾರ್ಯಕ್ರಮ ಅಡ್ಡಿಯಾಯಿತು ಎಂದರು. ಇದನ್ನೂ ಓದಿ: ಬೆಂಗಳೂರು ಬಂದ್: ಬಿಎಂಟಿಸಿ ಸಂಚಾರ ಇರುತ್ತಾ? ಇಲ್ವೋ? – ಗೊಂದಲದಲ್ಲಿ ಚಾಲಕರು
ಒಟ್ಟಿನಲ್ಲಿ ಕೋಲಾರದಲ್ಲಿಂದು ಜನರಿಗಾಗಿ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮ ಶಾಸಕ ಹಾಗೂ ಸಂಸದರ ವೈಯಕ್ತಿಕ ವಿಚಾರದ ಸಲುವಾಗಿ ರಣರಂಗವಾಗಿ ಪರಿಣಮಿಸಿತು. ಅಲ್ಲಿ ಇಬ್ಬರೂ ಜನಪ್ರತಿನಿಧಿಗಳು ಒಬ್ಬರನ್ನೊಬ್ಬರು ಪರಸ್ಪರ ನಿಂದಿಸಿಕೊಳ್ಳುತ್ತಿದ್ದರೆ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದ ಜನರಿಗಂತು ಇವರಿಬ್ಬರ ಫೈಟ್ ದರ್ಶನವಾಗುತ್ತಿದ್ದಂತೆ ನಮ್ಮ ಸಮಸ್ಯೆಗಿಂತ ಇಲ್ಲಿ ಇವರ ಸಮಸ್ಯೆಗಳೇ ಹೆಚ್ಚಾಗಿದೆ ಅನ್ನಿಸಿತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]