ರಾಮನಗರ: ನಟ ರಿಯಲ್ ಸ್ಟಾರ್ ಉಪೇಂದ್ರರವರ ಅಭಿಮಾನಿಗಳು ಹಾಗೂ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ‘ಐ ಲವ್ ಯೂ’ ಸಿನಿಮಾ ವೀಕ್ಷಣೆಗೆ ಬಂದ ವೀಕ್ಷಕರಿಗೆ ಸಸಿಗಳನ್ನು ವಿತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಮಾಡಿದ್ದಾರೆ.
ಜಿಲ್ಲೆಯ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಹಾಗೂ ಉಪ್ಪಿ ಅಭಿಮಾನಿಗಳು ನಗರದ ಶಾನ್ ಥಿಯೇಟರ್ ಬಳಿ ಸಿನಿಮಾ ವೀಕ್ಷಣೆಗೆ ಬಂದ ವೀಕ್ಷಕರಿಗೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ವಿತರಿಸಿದ್ದಾರೆ. ಪರಿಸರ ದಿನಾಚರಣೆಯನ್ನ ಉಪೇಂದ್ರ ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳ ಜೊತೆ ಆಚರಿಸುವ ಮೂಲಕ ಸಿನಿಮಾ ಪ್ರೀಯರಿಗೆ 1,000ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದಾರೆ.
ಇದೇ ವೇಳೆ ಸಸಿ ವಿತರಣೆ ಜೊತೆಗೆ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನ ತಿಳಿಸುವಂತೆ ಅರ್ಜಿಗಳನ್ನು ವಿತರಿಸಿದ್ದಾರೆ. ಬಳಿಕ ಸಾರ್ವಜನಿಕರ ದೂರನ್ನ ಆಡಳಿತ ಪಕ್ಷದ ಶಾಸಕರು, ಸಚಿವರ ಗಮನಕ್ಕೆ ತಂದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.
‘ಐ ಲವ್ ಯೂ’ ಸಿನಿಮಾವನ್ನು ಆರ್. ಚಂದ್ರು ನಿರ್ದೇಶನ ಮಾಡಿದ್ದು, ಉಪೇಂದ್ರ ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಮತ್ತು ಸೋನುಗೌಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಚಿತಾ ರಾಮ್ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.