ಬುಲಂದ್ಶಹರ್: ತಂದೆಯೊಬ್ಬ ತನ್ನ 9 ವರ್ಷದ ಮಗಳ ರಕ್ತನಾಳವನ್ನು ಕತ್ತರಿಸಿ, ಆಕೆಯ ಕತ್ತು ಹಿಸುಕಿ ಕೊಂದಿದ್ದಲ್ಲದೇ ಮಗನ ಮೇಲೆಯೂ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ.
ಕುಡಿದ ಮತ್ತಿನಲ್ಲಿ ತಂದೆ ಈ ಕೃತ್ಯ ಎಸಗಿದ್ದಾನೆ ಎಂಬುದಾಗಿ ವರದಿಯಾಗಿದೆ. ದೆಬೈ ಗ್ರಾಮದ ನಿವಾಸಿಯಾಗಿರೋ ಆರೋಪಿ ತಂದೆ 45 ವರ್ಷದ ಪ್ರದೀಪ್, ಬುಧವಾರ ಕುಡಿದ ಮತ್ತಿನಲ್ಲಿ ಬಂದು ತನ್ನ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ತನ್ನ 12 ವರ್ಷದ ಮಗನ ರಕ್ತನಾಳವನ್ನು ಕೂಡ ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಡಿಪಿ ತ್ಯಾಗಿ ತಿಳಿಸಿದ್ದಾರೆ.
ಘಟನೆಯ ನಂತರ ಸಾವೀಗೀಡಾದ ಬಾಲಕಿ ಹಾಗೂ ಹಲ್ಲೆಯಿಂದ ರಕ್ತಸ್ರಾವವಾಗುತ್ತಿದ್ದ ಬಾಲಕನನ್ನು ನೆರೆಮನೆಯವರು ನೋಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯ ಆರೋಪಿ ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.