ಲಕ್ನೋ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಬರೋಬ್ಬರಿ 10 ಸಾವಿರ ಸೀರೆಗಳನ್ನು ಹಂಚಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸಚಿವೆ ಸೀರೆ ಹಂಚಲು ಮುಂದಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದಲೇ ಕಣಕ್ಕಿಳಿಯಲ್ಲಿದ್ದಾರೆ. ಅಮೇಥಿ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಸ್ಮೃತಿ ಇರಾನಿ ಅಲ್ಲಿನ ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸ್ಮೃತಿ ಇರಾನಿ ಅವರು ತಮ್ಮ ಆಪ್ತ ವಿಜಯ್ ಗುಪ್ತಾರ ಮುಖಾಂತರ ಶನಿವಾರ ಕಾರ್ಯಕ್ರಮದಲ್ಲಿ ಸೀರೆಗಳನ್ನು ವಿತರಣೆ ಮಾಡಲಾಗಿದೆ. ಅಮೇಥಿಯ ಬೂತ್ ಮಟ್ಟದ ಕಾರ್ಯಕರ್ತೆಯರಿಗೂ ಸೀರೆಗಳನ್ನು ನೀಡಲಾಗಿದೆ.
ಪ್ರತಿ ಹೋಳಿ ಹಬ್ಬ ಮತ್ತು ದೀಪಾವಳಿಗೆ ಸ್ಮೃತಿ ಇರಾನಿ ಅವರು ಕ್ಷೇತ್ರದ ಸೋದರಿಯರಿಗೆ ಸೀರೆಗಳನ್ನು ನೀಡುವ ಮೂಲಕ ಶುಭಾಶಯ ತಿಳಿಸುತ್ತಾರೆ. ಹಾಗೆಯೇ ಈ ವರ್ಷವೂ ಸೀರೆಗಳನ್ನು ವಿತರಣೆ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರಗಳಿಂದ ಸೋತ್ರೂ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದ ಜನರು ಸ್ಮೃತಿ ಇರಾನಿ ಅವರನ್ನು ದೀದಿ (ಅಕ್ಕ) ಎಂದು ಕರೆಯುತ್ತಾರೆ ಎಂದು ಅಮೇಥಿಯ ಬಿಜೆಪಿ ಜಿಲ್ಲಾಧ್ಯಕ್ಷ ಉಮಾಶಂಕರ್ ಪಾಂಡೆ ತಿಳಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧೆ ಮಾಡಿದ್ದರು. 2014ರಲ್ಲಿ ಅಮೇಥಿ ಕ್ಷೇತ್ರ ಇಡೀ ದೇಶದ ಗಮನವನ್ನ ಸೆಳೆದಿತ್ತು. 1998ರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಸಂಜಯ್ ಸಿಂಗ್ ಗೆಲುವು ಸಾಧಿಸಿದ್ದರು. ತದನಂತರ ಎದುರಾದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಸ್ಮೃತಿ ಇರಾನಿ ಅವರು 2014ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರಿಗೆ ತೀವ್ರ ಪೈಪೋಟಿಯನ್ನು ನೀಡಿದ್ದರು. ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದ್ರೆ ಸ್ಮೃತಿ ಇರಾನಿ 3,00,748 ಮತ ಪಡೆಯುವ ಮೂಲಕ ಸೋಲು ಕಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv