ಗದಗ: ಭಾರತ್ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ, ಪಂಜಾಬ್ ಹಾಗೂ ಇತರೆ 2 ರಾಜ್ಯ ಹೊರತುಪಡಿಸಿ ದೇಶದಲ್ಲಿ ಎಲ್ಲ ಕಡೆ ಕೃಷಿ ಕಾಯ್ದೆ ಸ್ವಾಗತಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಬಂದ್ ಗೆ ಮುಂದಾದ ಹೋರಾಟಗಾರರ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಮಾತನಾಡಿದರು. ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳಿಗೆ ಕೃಷಿಯಲ್ಲಿ ಅಮೂಲ್ಯ ಪರಿವರ್ತನೆ ಮಾಡಲು ಸಾಧ್ಯವಿರಲಿಲ್ಲ. ಬಿಜೆಪಿ ಜಾರಿ ಮಾಡಿದ ಕಾನೂನನ್ನು ಕಾಂಗ್ರೆಸ್ ಮ್ಯಾನಿಫೆಸ್ಟ್ ನಲ್ಲಿ ಹೇಳಿಕೊಂಡಿದ್ದರು. ಕಾಂಗ್ರೆಸ್ ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹೇಳಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಅದನ್ನು ಜಾರಿ ಮಾಡುವ ಧೈರ್ಯ ಇರಲಿಲ್ಲ. ನರೇಂದ್ರ ಮೋದಿ ಸರ್ಕಾರ ಧೈರ್ಯ ದಿಂದ ಅನೇಕ ರಿಫಾರ್ಮ್ ಜಾರಿ ಮಾಡಿದೆ ಎಂದರು. ಇದನ್ನೂ ಓದಿ: ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಸಿ.ಸಿ.ಪಾಟೀಲ್
ದೆಹಲಿನಲ್ಲಿ ಕೆಲ ರೈತರು, ಇನ್ನೂ ಕೆಲವು ರೈತರುಲ್ಲದವರೂ ಹೋರಾಟದಲ್ಲಿದ್ದಾರೆ. ಅವರ ಜೊತೆ 11 ಬಾರಿ ಮಾತುಕತೆಯಾಗಿದೆ. ಬಿಜೆಪಿ ವಿರೋಧಿ ಮನಸ್ಸುಗಳು ಈ ಬಂದ್ ಕೆಲಸ ಮಾಡುತ್ತಿವೆ. ಆದರೆ ಜನ ಕೃಷಿ ಕಾಯ್ದೆ ಪರವಾಗಿದ್ದಾರೆ. ಭಾರತ್ ಬಂದ್ ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
ಒತ್ತಾಯಪೂರ್ವಕವಾಗಿ ಬಂದ್ ಮಾಡದಂತೆ ಕರ್ನಾಟಕ ಸರ್ಕಾರ ಸಹ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಅನೇಕರು ಇದ್ದರು.