ಬೆಳಗಾವಿ(ಚಿಕ್ಕೋಡಿ): ಸಿಎಂ ಯಡಿಯೂರಪ್ಪ ಅವರನ್ನ ಬ್ಲಾಕ್ಮೇಲ್ ಮಾಡುವ ಗಂಡಸು ಹುಟ್ಟಿಲ್ಲ, ಮುಂದೆಯೂ ಹುಟ್ಟೋದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ಅವರು, ಉನ್ನತ ಖಾತೆಗಾಗಿ ಲಾಬಿ ನಡೆಸುತ್ತಿರುವ ಶಾಸಕರಿಗೆ ಟಾಂಗ್ ನೀಡಿದ್ದಾರೆ. ಡಿಸಿಎಂ ಸ್ಥಾನದ ಬಗ್ಗೆಯೂ ಮಾತನಾಡಿ, ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ರಾಜ್ಯದ ಮುಖ್ಯಮಂತ್ರಿಗಳು ಎಲ್ಲವನ್ನೂ ನೀಗಿಸಲು ಸಭಲರಾಗಿದ್ದಾರೆ. ಹೀಗಾಗಿ ಡಿಸಿಎಂ ಸ್ಥಾನವನ್ನ ನಿರ್ಮಾಣ ಮಾಡಬಾರದು ಎಂದು ನನ್ನ ಒತ್ತಾಯವಾಗಿದೆ. ಡಿಸಿಎಂ ಸ್ಥಾನ ಅವಶ್ಯಕತೆಯಿಲ್ಲ ಎಂದು ಉಮೇಶ ಕತ್ತಿ ತಮ್ಮ ಅನಿಸಿಕೆ ಹಂಚಿಕೊಂಡರು.
ರಾಮನ ಭಂಟ ಹನುಮನ ಹಾಗೆ ಯಡಿಯೂರಪ್ಪ ಅವರ ಭಂಟ ಕತ್ತಿ ಆಗಿದ್ದಾರೆ. ಯಡಿಯೂರಪ್ಪ ಅವರ ಮನೆಗೆ ದಿನ ನಿತ್ಯ ಹೋಗುವುದರ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ನಮ್ಮ ನಾಯಕರು. ಬೆಳಗ್ಗೆ ಶಾಂತ ರೀತಿಯಾಗಿ ಸಿಗುತ್ತಾರೆ ಎಂದು ಅವರ ಮನೆಗೆ ಹೋಗುತ್ತೇನೆ. ಅಲ್ಲದೇ ಹುಕ್ಕೇರಿ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆ ಅಭಿವೃದ್ಧಿಗಾಗಿ ಅವರನ್ನ ಭೇಟಿ ಆಗುತ್ತೇನೆ ಎಂದು ತಿಳಿಸಿದರು.
ಇವತ್ತು ಸಚಿವ ಸ್ಥಾನ ನೀಡಿ ಎಂದು ಕೇಳಲು ಅವರನ್ನು ಭೇಟಿಯಾಗುತ್ತಿದ್ದೇನೆ. ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಅಚಲ ವಿಶ್ವಾಸವಿದೆ. ಅವರು ಸಚಿವ ಸ್ಥಾನ ಕೊಡುತ್ತಾರೆ ಎಂದು ಬಿಡಲು ಆಗುವದಿಲ್ಲ. ನಾನು ಕೂಡ ಸಚಿವ ಸಂಪುಟ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದಷ್ಟು ಬೇಗ ಸಚಿವನಾಗಿ ರಾಜ್ಯದ ಜನರ ಸೇವೆ ಸಲ್ಲಿಸುತ್ತೇನೆ ಎಂದು ಉಮೇಶ ಕತ್ತಿ ಹೇಳಿದರು.