ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಜಾರಿಗೆ ತಂದಿರುವ ʼಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಗಳು, 2026ʼ ಪ್ರಸ್ತುತ ದೇಶಾದ್ಯಂತ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಹೊಸ ನಿಯಮಗಳಿಂದ ತಮಗೆ ಅನ್ಯಾಯವಾಗುತ್ತದೆ, ಇದು ಸಮಾನತೆಯ ಬದಲು ಅಸಮಾನತೆಯನ್ನೇ ಪೋಷಿಸುತ್ತದೆ ಎಂದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಇದೀಗ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗಟ್ಟಲು ಯುಜಿಸಿ ನಿಯಮ ಜಾರಿಗೆ ತಂದ ಹೊಸ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹಾಗಿದ್ರೆ ಏನಿದು ವಿವಾದ? ಯುಜಿಸಿ ಹೊಸ ನಿಯಮಾವಳಿಗಳು ಏನು ಹೇಳುತ್ತವೆ? ಸುಪ್ರೀಂ ಕೋರ್ಟ್ ತಡೆ ನೀಡಿದ್ದೇಕೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಯುಜಿಸಿ ಹೊಸ ನಿಯಮ?
ಯುಜಿಸಿ ಹೊಸ ನಿಯಮಾವಳಿ 2026 ಎಂಬುದು ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ, ಧರ್ಮ, ಲಿಂಗ ಮತ್ತು ಅಂಗವೈಕಲ್ಯದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಹೊರಡಿಸಿರುವ ಒಂದು ಕಟ್ಟುನಿಟ್ಟಾದ ಕಾನೂನು ಚೌಕಟ್ಟಾಗಿದೆ. 2012ರ ಹಳೆಯ ಮಾರ್ಗಸೂಚಿಗಳ ಬದಲಿಗೆ ಜಾರಿಗೆ ಬಂದಿರುವ ಈ ನಿಯಮವು, ಇದೇ ಮೊದಲ ಬಾರಿಗೆ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಜೊತೆಗೆ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ತಾರತಮ್ಯದ ವಿರುದ್ಧ ಕಾನೂನು ರಕ್ಷಣೆ ನೀಡಿದೆ. ಇದರ ಅಡಿಯಲ್ಲಿ ಪ್ರತಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ‘ಸಮಾನ ಅವಕಾಶ ಕೇಂದ್ರ’ ಮತ್ತು ‘ಸಮಾನತೆ ಸಮಿತಿ’ಯನ್ನು ರಚಿಸಬೇಕು ಹಾಗೂ ದೂರು ದಾಖಲಾದ 15 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು. ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ಅನುದಾನ ಕಡಿತ ಅಥವಾ ಮಾನ್ಯತೆ ರದ್ದತಿಯಂತಹ ಕಠಿಣ ದಂಡನೆಯ ಎಚ್ಚರಿಕೆ ನೀಡಲಾಗಿದೆ.
2012ರ ನಿಯಮಕ್ಕಿಂತ ಹೇಗೆ ಭಿನ್ನ?:
ಯುಜಿಸಿ 2012ರ ನಿಯಮದಲ್ಲಿ ಎಸ್ಸಿ, ಎಸ್ಟಿಗಳ ರಕ್ಷಣೆಯನ್ನು ಮಾತ್ರ ಸೇರಿಸಲಾಗಿತ್ತು. ಆದರೆ ಹೊಸ ನಿಯಮದಲ್ಲಿ ಇದನ್ನು ಒಬಿಸಿಗಳಿಗೂ ವಿಸ್ತರಿಸಲಾಗಿದೆ. ಆದರೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಒಬಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದತ್ತಾಂಶಗಳ ಪ್ರಕಾರ, 2021–22ರಲ್ಲಿ ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಶೇ.60.8ರಷ್ಟಿದೆ. 1.63 ಕೋಟಿ ಒಬಿಸಿ, 66.23 ಲಕ್ಷ ಎಸ್ಸಿ ಮತ್ತು 27.1 ಲಕ್ಷ ಎಸ್ಟಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಂದರೆ ಒಬಿಸಿಗಳು ಬೃಹತ್ ಸಂಖ್ಯೆಯಲ್ಲಿದ್ದರೂ ಅವರಿಗೆ ನಿಯಮವನ್ನು ವಿಸ್ತರಿಸಿರುವುದು ಪ್ರಶ್ನೆ ಮೂಡಿಸಿದೆ. 2012ರ ನಿಯಮದಲ್ಲಿ ಲಿಂಗ, ಅಂಗವೈಕಲ್ಯ, ಧರ್ಮ, ಭಾಷೆ, ಜನಾಂಗ ಮತ್ತು ಜನ್ಮಸ್ಥಳದ ಮೇಲಿನ ತಾರತಮ್ಯಗಳನ್ನು ಪರಿಗಣಿಸಲಾಗಿತ್ತು. ಆದರೆ ಹೊಸ ನಿಯಮ ಜಾತಿಯನ್ನೇ ಹೆಚ್ಚು ಕೇಂದ್ರೀಕರಿಸಿದೆ.
ಪ್ರಮುಖ ನಿಬಂಧನೆಗಳು ಏನು?
ಸಮಾನ ಅವಕಾಶ ಕೇಂದ್ರಗಳ ಸ್ಥಾಪನೆ:
ದೇಶದ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಕ್ಯಾಂಪಸ್ನಲ್ಲಿ ಸಮಾನತೆಯನ್ನು ಕಾಪಾಡಲು ಕಡ್ಡಾಯವಾಗಿ ‘ಸಮಾನ ಅವಕಾಶ ಕೇಂದ್ರ’ ಮತ್ತು ‘ಸಮಾನತೆ ಸಮಿತಿ’ಯನ್ನು ಸ್ಥಾಪಿಸಬೇಕು.
ಒಬಿಸಿ ವರ್ಗಕ್ಕೆ ರಕ್ಷಣೆ:
ಈ ನಿಯಮದ ಮೂಲಕ ಮೊದಲ ಬಾರಿಗೆ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಜೊತೆಗೆ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಜಾತಿ ತಾರತಮ್ಯದ ವಿರುದ್ಧ ಅಧಿಕೃತ ಕಾನೂನು ರಕ್ಷಣೆಯನ್ನು ವಿಸ್ತರಿಸಲಾಗಿದೆ.
ತ್ವರಿತ ತನಿಖಾ ಪ್ರಕ್ರಿಯೆ:
ಯಾವುದೇ ದೂರು ದಾಖಲಾದ ಕೇವಲ 24 ಗಂಟೆಗಳ ಒಳಗಾಗಿ ಸಂಸ್ಥೆಯು ಮೊದಲ ಸಭೆಯನ್ನು ನಡೆಸಬೇಕು ಮತ್ತು ಮುಂದಿನ 15 ಕೆಲಸದ ದಿನಗಳೊಳಗೆ ಸಂಪೂರ್ಣ ತನಿಖಾ ವರದಿಯನ್ನು ಸಿದ್ಧಪಡಿಸಬೇಕು.
ಮುಖ್ಯಸ್ಥರ ನೇರ ಹೊಣೆಗಾರಿಕೆ:
ಈ ಸಮಾನತೆ ನಿಯಮಗಳನ್ನು ಜಾರಿಗೆ ತರುವಲ್ಲಿ ವಿಫಲವಾದರೆ, ಆಯಾ ವಿಶ್ವವಿದ್ಯಾಲಯದ ಕುಲಪತಿಗಳು ಅಥವಾ ಕಾಲೇಜಿನ ಪ್ರಾಂಶುಪಾಲರನ್ನು ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ.
ಕಠಿಣ ದಂಡನೆ ಕ್ರಮಗಳು:
ನಿಯಮಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನೀಡುವ ಅನುದಾನವನ್ನು ಕಡಿತಗೊಳಿಸುವುದು, ಪದವಿ ನೀಡುವ ಅಧಿಕಾರವನ್ನು ಅಮಾನತು ಮಾಡುವುದು ಅಥವಾ ಸಂಸ್ಥೆಯ ಮಾನ್ಯತೆಯನ್ನೇ ರದ್ದುಗೊಳಿಸುವಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬಹುದು.
ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು ಏಕೆ?
ಕಳೆದ ಐದು ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ದೂರುಗಳು ಗಣನೀಯವಾಗಿ ಏರಿಕೆಯಾಗಿವೆ. ಅಂಕಿಅಂಶಗಳ ಪ್ರಕಾರ, 2019-20ರಲ್ಲಿ 173 ಇದ್ದ ದೂರುಗಳ ಸಂಖ್ಯೆ 2023-24ರ ವೇಳೆಗೆ 378ಕ್ಕೆ ಅಂದರೆ ಸುಮಾರು ಶೇ. 118ರಷ್ಟು ಹೆಚ್ಚಳ ಕಂಡಿದೆ. ಇದರೊಂದಿಗೆ, ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲ ಮತ್ತು ಮುಂಬೈನ ಡಾ. ಪಾಯಲ್ ತಡ್ವಿ ಅವರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳು ಈ ಬದಲಾವಣೆಗೆ ಪ್ರೇರಣೆಯಾಗಿವೆ.
ಹಳೆಯ 2012ರ ನಿಯಮಗಳು ಕೇವಲ ಸಲಹೆಗಳಂತಿದ್ದು ತಾರತಮ್ಯ ತಡೆಯುವಲ್ಲಿ ವಿಫಲವಾಗಿವೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯವು, ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಹೆಚ್ಚು ಕಟ್ಟುನಿಟ್ಟಾದ ಮತ್ತು ಕಾನೂನುಬದ್ಧವಾದ ದೂರು ಪರಿಹಾರ ವ್ಯವಸ್ಥೆಯನ್ನು ರೂಪಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯದಂತೆ ಕ್ಯಾಂಪಸ್ಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಖಚಿತಪಡಿಸಲು ಯುಜಿಸಿ ಈ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.
ವಿವಾದಕ್ಕೆ ಕಾರಣಗಳೇನು?
-ಮೇಲ್ನೋಟಕ್ಕೆ ಈ ನಿಯಮಗಳು ಸಾಮಾಜಿಕ ಸಮಾನತೆಯ ಗುರಿ ಹೊಂದಿದ್ದರೂ, ಕೆಲವು ಅಂಶಗಳು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿವೆ.
-ಯುಜಿಸಿ ತಂದಿರುವ ಹೊಸ ನಿಯಮ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ, ಈ ನಿಯಮಾವಳಿಯ ಸೆಕ್ಷನ್ 3(c) ಅಡಿಯಲ್ಲಿ ಜಾತಿ ತಾರತಮ್ಯದ ವ್ಯಾಖ್ಯಾನವನ್ನು ಕೇವಲ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ, ಇದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ಸಾಂಸ್ಥಿಕ ರಕ್ಷಣೆ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ.
– ಈ ಹಿಂದಿನ ಕರಡು ಪ್ರತಿಯಲ್ಲಿದ್ದ ‘ಸುಳ್ಳು ಅಥವಾ ದುರುದ್ದೇಶಪೂರಿತ ದೂರು ನೀಡುವವರಿಗೆ ಶಿಕ್ಷೆ’ ವಿಧಿಸುವ ನಿಯಮವನ್ನು ಅಂತಿಮ ಕರಡಿನಲ್ಲಿ ತೆಗೆದುಹಾಕಲಾಗಿದ್ದು, ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿರುದ್ಧ ದ್ವೇಷ ಸಾಧಿಸಲು ಬಳಕೆಯಾಗಬಹುದು ಎಂಬ ಆತಂಕ ಸೃಷ್ಟಿಸಿದೆ.
-ಒಂದು ವೇಳೆ ದುರುದ್ದೇಶ ಪೂರ್ವಕವಾಗಿ ದೂರು ನೀಡಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ನಿಯಮದಲ್ಲಿ ಅವಕಾಶ ಇಲ್ಲ. ಆದರೆ, ಸುಳ್ಳು ದೂರು ನೀಡಿದ್ದರೂ ಅದರ ವಿಚಾರಣೆ ನಡೆಸಬೇಕಾಗುತ್ತದೆ.
-ಈ ನಿಯಮಗಳಲ್ಲಿ ಬಳಕೆಯಾಗಿರುವ ‘ಪರೋಕ್ಷ ತಾರತಮ್ಯ’ ಮತ್ತು ‘ಘನತೆಗೆ ಧಕ್ಕೆ’ ಎಂಬಂತಹ ಪದಗಳಿಗೆ ಸ್ಪಷ್ಟವಾದ ವ್ಯಾಖ್ಯಾನ ಇಲ್ಲದಿರುವುದು ಅಧಿಕಾರಿಗಳು ಇದನ್ನು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳಲು ದಾರಿ ಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.
-ಹೊಸ ನಿಯಮದ ಪ್ರಕಾರ ಸಮಾನತೆ ಸಮಿತಿಯಲ್ಲಿ ಮೀಸಲಾತಿ ವರ್ಗದ ಪ್ರತಿನಿಧಿಗಳು ಇರುವುದು ಕಡ್ಡಾಯ, ಆದರೆ ಅನ್-ರಿಸರ್ವ್ಡ್ ವರ್ಗದವರಿಗೆ ಯಾವುದೇ ಪ್ರಾತಿನಿಧ್ಯವನ್ನು ನಿಗದಿಪಡಿಸದಿರುವುದು ತನಿಖೆಯ ಸಮಯದಲ್ಲಿ ಪಕ್ಷಪಾತ ಉಂಟಾಗಬಹುದು ಎಂಬ ಭಯವನ್ನು ಹುಟ್ಟುಹಾಕಿದೆ.
ಸುಪ್ರೀಂಗೆ ಮೊರೆ, ತಡೆ:
ಸುಪ್ರೀಂ ಕೋರ್ಟ್ಗೆ ವಿನೀತ್ ಜಿಂದಾಲ್ ಎಂಬವರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ‘ಜಾತಿ ತಾರತಮ್ಯದ ವಿರುದ್ಧದ ಸಮಿತಿಗೆ ಕೇವಲ ಎಸ್ಸಿ, ಎಸ್ಟಿ ಮತ್ತು ಇತರೆ ಒಬಿಸಿ ವಿದ್ಯಾರ್ಥಿಗಳು ಮಾತ್ರ ದೂರು ಸಲ್ಲಿಸಬಹುದು. ಇದು ಸಾಮಾನ್ಯ ವರ್ಗಕ್ಕೆ ಅನ್ಯಾಯವಾಗುತ್ತದೆ. ಮೇಲ್ವರ್ಗದವರೂ ಜಾತಿ ನಿಂದನೆ, ತಾರತಮ್ಯ ಅನುಭವಿಸುತ್ತಾರೆ. ಅಲ್ಲದೇ ಯುಜಿಸಿ ಹೊರಡಿಸಿರುವ ಆದೇಶವು ಸಂವಿಧಾನದ ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ. ಹೀಗಾಗಿ ಎಲ್ಲ ವರ್ಗಗಳನ್ನು ಒಳಗೊಳ್ಳುವ ಸಮಿತಿ ರಚಿಸಬೇಕು. ಇಲ್ಲವಾದಲ್ಲಿ ಸಾಮಾನ್ಯ ವರ್ಗಕ್ಕೆ ಸರಿಯಾಗಿ ದೂರು ನೀಡುವ ವ್ಯವಸ್ಥೆಯೂ ಇರುವುದಿಲ್ಲ’ ಎಂದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟು ನಿಯಮಗಳಿಗೆ ತಡೆ ನೀಡಿ ಮರುಪರಿಶೀಲನೆಗೆ ಸೂಚಿಸಿದೆ.
ಕೇಂದ್ರದ ಸ್ಪಷ್ಟನೆ:
ಯುಸಿಜಿ ನಿಯಮದ ವಿರುದ್ಧ ಆಕ್ಷೇಪಗಳು ಭುಗಿಲೆದ್ದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದು,‘ತಾರತಮ್ಯದ ಹೆಸರಿನಲ್ಲಿ ಕಾನೂನಿನ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಇದನ್ನು ಖಚಿತಪಡಿಸಿಕೊಳ್ಳುವುದು ಯುಜಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಎಲ್ಲಾ ಕ್ರಮಗಳನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ

