ರಾಯಚೂರು: ಇಂದು ಎಲ್ಲೆಡೆ ಹೊಸ ವರ್ಷದ ಯುಗಾದಿ ಸಂಭ್ರಮ ಮನೆ ಮಾಡಿದೆ. ಇದೇ ವೇಳೆ ರಾಯಚೂರಿನ ಸಿರವಾರ ತಾಲೂಕಿನ ಕಲ್ಲೂರಿನ ಮಾಂಟೇಶ್ವರ ದೇವಾಲಯದಲ್ಲಿ ಯುಗಾದಿ ಹಿನ್ನೆಲೆಯಲ್ಲಿ ಸೂರ್ಯರಶ್ಮಿ ನೇರವಾಗಿ ಶಿವಲಿಂಗ ಸ್ಪರ್ಶಿಸುವ ವಿಸ್ಮಯ ಘಟನೆ ನಡೆದಿದೆ.
ಪ್ರತೀ ವರ್ಷ ಸೂರ್ಯಮಾನ ಯುಗಾದಿ ದಿನ ಸೂರ್ಯರಶ್ಮಿ ಮಾಂಟೇಶ್ವರ ದೇವರನ್ನು ನೇರವಾಗಿ ಸ್ಪರ್ಶಿಸುತ್ತದೆ. ಹೊಸ ವರ್ಷದ ಆರಂಭ ದಿನದ ವಿಸ್ಮಯಕ್ಕೆ ಭಕ್ತರು ಬೆರಗಾಗಿದ್ದಾರೆ. 1000 ವರ್ಷದ ಇತಿಹಾಸವಿರುವ ಪುರಾತನ ದೇವಾಲಯದಲ್ಲಿ ಪ್ರತೀವರ್ಷ ಏಪ್ರಿಲ್ 5, 6 ಮತ್ತು 7 ರಂದು ತಪ್ಪದೇ ಸೂರ್ಯನ ಕಿರಣಗಳು ಬೆಳಗ್ಗೆ 6 ಗಂಟೆ 15 ನಿಮಿಷದ ಸುಮಾರಿಗೆ ಶಿವಲಿಂಗವನ್ನ ಸ್ಪರ್ಶಿಸುತ್ತವೆ.
ಸೂರ್ಯರಶ್ಮಿ ನೇರವಾಗಿ ಬಂದು ಶಿವಲಿಂಗದ ಮೇಲೆ ಬೆಳಕು ಬೀರುತ್ತಿದ್ದು, ಭಕ್ತರು ಅದನ್ನು ಕಣ್ತುಂಬ ನೋಡಿಕೊಂಡು ದರ್ಶನ ಪಡೆಯುತ್ತಿದ್ದಾರೆ. ಈ ವರ್ಷ ಯುಗಾದಿ ಏಪ್ರಿಲ್ 6 ಕ್ಕೆ ಬಂದಿರುವುದು ವಿಶೇಷವಾಗಿದ್ದು, ಹೀಗಾಗಿ ಈ ವರ್ಷ ಶುಭವನ್ನೇ ತರಲಿದೆ ಎಂದು ಭಕ್ತರು ನಂಬಿದ್ದಾರೆ.