– ಸುಪ್ರೀಂನಲ್ಲಿ ಅನರ್ಹರ ಪರವಾಗಿಯೇ ತೀರ್ಪು ಬರುತ್ತೆ
ಉಡುಪಿ: ಶಿವಸೇನೆಗೆ ಇನ್ನೂ ಕಾಲ ಮಿಂಚಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಕೈ ಜೋಡಿಸಿ ನಿಮ್ಮನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿವಿ ಸದಾನಂದ ಗೌಡ ಭರವಸೆ ನೀಡಿದ್ದಾರೆ.
ಉಡುಪಿಯಲ್ಲಿ ಬೀಚ್ ಕ್ಲೀನಿಂಗ್ ಅಭಿಯಾನದಲ್ಲಿ ಪಾಲ್ಗೊಂಡ ಡಿವಿಎಸ್, ಚುನಾವಣೆಯಲ್ಲಿ ಜನಾದೇಶ ಬಿಜೆಪಿ ನೇತೃತ್ವದ ತಂಡಕ್ಕೆ ಸಿಕ್ಕಿತ್ತು. ಅಧಿಕಾರಕ್ಕಾಗಿ ನಮ್ಮ ಮಿತ್ರರೇ ಆಟವಾಡುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದ ಬೆಳವಣಿಗೆ. ಶಿವಸೇನೆ ಮತ್ತು ಬಿಜೆಪಿ ತುಂಬಾ ಸಮಯದ ಗೆಳೆಯರು ಎಂದು ತಿಳಿಸಿದರು.
ನಮ್ಮ ಅರ್ಧದಷ್ಟು ಸಂಖ್ಯೆ ಕೂಡಾ ಶಿವಸೇನೆಯಲ್ಲಿ ಇಲ್ಲ. ಇನ್ನೂ ಕಾಲ ಮಿಂಚಿಲ್ಲ, ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತೇವೆ ಬನ್ನಿ ಎಂದಿದ್ದಾರೆ. ಮೋದಿ ಆಡಳಿತ, ಫಡ್ನವಿಸ್ ಆಡಳಿತ ಮಾದರಿಯಾಗಿದೆ. ಮಹಾರಾಷ್ಟ್ರದಲ್ಲಿ ಇನ್ನೂ ಯಾವ ಹೊಂದಾಣಿಕೆಯೂ ಆಗಿಲ್ಲ. ರಾಜ್ಯಪಾಲರು ನ್ಯಾಚುರಲ್ ಜಸ್ಟೀಸ್ ಪಾಲಿಸುತ್ತಿದ್ದಾರೆ ಎಂದರು.
ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಸದಾನಂದ ಗೌಡ, ನಾಳೆ ಅನರ್ಹರ ತೀರ್ಪು ಬರುತ್ತೆ. ತೀರ್ಪು ಬಂದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ. ನ್ಯಾಯಾಂಗವನ್ನು ಗೌರವದಿಂದ ನೋಡ್ತೇವೆ. ರಾಮಜನಭೂಮಿ ವಿಚಾರದಲ್ಲಿ ಕೋರ್ಟ್ ಸಮಾನತೆಯ ಸಂದೇಶ ಕೊಟ್ಟಿದೆ. ಅನರ್ಹರ ವಿಚಾರವೂ ಯೋಗ್ಯ ರೀತಿಯ ತೀರ್ಪು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾನ ನಾಗರಿಕಸಂಹಿತೆ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರಣಾಳಿಕೆಯಲ್ಲಿ ಇರುವ ಒಂದೊದೇ ಭರವಸೆ ಈಡೇರಿಸಲಾಗುತ್ತಿದೆ. ಪ್ರಣಾಳಿಕೆಯನ್ನು ಈಡೇರಿಸುವುದು ನಮ್ಮ ಧರ್ಮ. ಸಮಾನ ನಾಗರಿಕ ಸಂಹಿತೆ ದೇಶವನ್ನು ಏಕತೆ, ಅಖಂಡತೆ ಕಡೆಗೆ ಕೊಂಡೊಯ್ಯುತ್ತದೆ. ಖಂಡಿತವಾಗಿಯೂ ಪೂರ್ವ ತಯಾರಿಯ ಜೊತೆಗೆ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದರು.