ಉಡುಪಿ: ಕುಂದಾಪುರದ ಗುಡ್ಡಟ್ಟು ಪ್ರದೇಶದಲ್ಲಿ ಚಿರತೆ ಸೆರೆಯಾಗಿದೆ. ಕೆಲವು ತಿಂಗಳುಗಳಿಂದ ನಿರಂತರವಾಗಿ ಭಯದ ವಾತಾವರಣ ಸೃಷ್ಟಿಸಿದ್ದ ಈ ಚಿರತೆ ಕೊನೆಗೂ ಕಳೆದ ರಾತ್ರಿ ಬೋನಿಗೆ ಬಿದ್ದಿದೆ.
ಕುಂದಾಪುರ ತಾಲೂಕಿನ ಶಂಕರನಾರಾಯಣ ಅರಣ್ಯ ಇಲಾಖೆ ವ್ಯಾಪ್ತಿಯ ಯಡ್ಯಾಡಿ ಮತ್ಯಾಡಿ ಗ್ರಾಮದಲ್ಲಿ ದಿನೇ ದಿನೇ ಚಿರತೆ ಉಪಟಳ ಹೆಚ್ಚಿದ್ದು, ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದವು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಯವರು ಕಳೆದ ತಿಂಗಳು ಚಂದ್ರಾವತಿ ಗುಡ್ಡೆಮನೆ ಎಂಬವರ ಜಾಗದಲ್ಲಿ ಬೋನು ಇಟ್ಟಿದ್ದರು. ಇದನ್ನೂ ಓದಿ: ಕೋಟದಲ್ಲಿ ಉರುಳಿಗೆ ಬಿದ್ದ ಆರು ವರ್ಷದ ಗಂಡು ಚಿರತೆ
ಸಾಕಷ್ಟು ಉಪಟಳ ನೀಡಿದ್ದ ಚಿರತೆ ಬೋನು ಇಲ್ಲದಲ್ಲೆಲ್ಲಾ ಓಡಾಡುತ್ತಿತ್ತು. ಕೊನೆಗೂ ಇಂದು ಬೆಳಿಗ್ಗೆ ಬೋನಿಗೆ ಬಿದ್ದಿದೆ. ಸೆರೆಸಿಕ್ಕ ಚಿರತೆಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿ ಕೊಲ್ಲೂರು ಅಭಯಾರಣ್ಯಕ್ಕೆ ರವಾನಿಸಿದ್ದಾರೆ. ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಅರಣ್ಯಾಧಿಕಾರಿ ಚಿರತೆಯನ್ನು ಪರಿಶೀಲಿಸಿ ಅಭಯಾರಣ್ಯ ಬಿಟ್ಟಿದ್ದಾರೆ. ಇದನ್ನೂ ಓದಿ: ಕರು ತಿನ್ನಲು ಬಂದಿದ್ದ ಚಿರತೆಯನ್ನು ಸೆರೆಹಿಡಿದ ರೈತರು
ಅರಣ್ಯಾಧಿಕಾರಿಗಳು ಸೆರೆ ಹಿಡಿದ ಚಿರತೆಯನ್ನು ಕೊಲ್ಲೂರು ಅಭಯಾರಣ್ಯಕ್ಕೆ ಬಿಟ್ಟು ಬಿಡುತ್ತಾರೆ. ಆದ್ರೆ ಚಿರತೆಗಳು ವಾಪಾಸ್ ಅದೇ ಜಾಗಕ್ಕೆ ಬಂದು ಉಪಟಳ ನೀಡುವುದು ಸಾಮಾನ್ಯವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.