– ದೈವ ದೃಷ್ಟಿ ಯಕ್ಷಗಾನದ ವೇಳೆ ಅಚಾತುರ್ಯ
ಉಡುಪಿ: ಯಕ್ಷಗಾನ ವೇಷಧಾರಿ ಮೇಲೆ ದೈವದ ಆವಾಹನೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ಹಟ್ಟಿಯಂಗಡಿ ಯಕ್ಷಗಾನ ಮೇಳದ ಕಲಾವಿದ ಧೂಮಾವತಿ ಅವರು ದೈವದ ವೇಷ ಧರಿಸಿದ್ದ ಸಂದರ್ಭದಲ್ಲಿ ದೈವದ ಆವಾಹನೆಯಾಗಿದೆ.
ರಂಗಸ್ಥಳ ಪ್ರವೇಶಕ್ಕೂ ಮುನ್ನ ಪ್ರೇಕ್ಷಕರ ನಡುವೆಯಿಂದ ಕೆಲ ಪಾತ್ರಧಾರಿಗಳನ್ನು ಕರೆತರಲಾಗುತ್ತದೆ. ಹಾಗೆಯೇ ಪಾತ್ರಧಾರಿ ರಾಜೇಶ್ ಆಚಾರ್ಯ ದೈವದ ವೇಷ ಧರಿಸಿದ್ದರು. ಈ ಸಂದರ್ಭ ಅವರ ಮೈಮೇಲೆ ಆವೇಶ ಬಂದಿದೆ. ಪಂಜು ಹಿಡಿದು ವಿಚಿತ್ರವಾಗಿ ವರ್ತಿಸಿದ ಕಲಾವಿದ ನೆಲಕ್ಕೆ ಬಿದ್ದಿದ್ದಾರೆ.
ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ಶಬರಿಮಲೆ ಯಾತ್ರೆಗೆ ಹೊರಡುವ ಮುನ್ನ ಯಕ್ಷಗಾನ ಪ್ರದರ್ಶನ ಮತ್ತು ಅನ್ನಸಂತರ್ಪಣೆ ಇರುತ್ತದೆ. ಈ ಬಾರಿ ದೈವ ದೃಷ್ಟಿ ಎಂಬ ಯಕ್ಷಗಾನ ಪ್ರಸಂಗವನ್ನು ತಂಡ ಆಡಿಸಿದ ವೇಳೆ ಘಟನೆ ನಡೆದಿದೆ. ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಕೂಡಲೇ ಆಗಮಿಸಿ ಪ್ರಸಾದ ಹಾಕಿದ ನಂತರ ಪಾತ್ರಧಾರಿ ಶಾಂತವಾಗಿದ್ದಾರೆ. ಯಕ್ಷಗಾನ ಪ್ರಸಂಗ ಮುಂದುವರಿದಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವಿದ ರಾಜೇಶ್ ಆಚಾರ್ಯ, ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಕೆಲವು ಕ್ಷಣಗಳ ನಂತರ ಸಹಜ ಸ್ಥಿತಿಗೆ ಬಂದಿದ್ದೇನೆ ಎಂದು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.