– ಸಸಿ ನೆಟ್ಟು ಸಂಪ್ರದಾಯ ಮುಂದುವರೆಸಿದ ಕ್ರೌನ್ ಪ್ರಿನ್ಸ್
ನವದೆಹಲಿ: ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (UAE Crown Prince Sheikh Khaled bin Mohamed bin Zayed Al Nahyan) ದೆಹಲಿಯ ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಯುಎಇಯ ಹಿಂದಿನ ನಾಯಕರು ಅನುಸರಿಸಿದ ವಿಶಿಷ್ಟ ಸಂಪ್ರದಾಯದ ಭಾಗವಾಗಿ ಅವರು ಅಮಲ್ಟಾಸ್ ಸಸಿಯನ್ನು ನೆಟ್ಟರು. ಈ ಮೂಲಕ ರಾಜ್ಘಾಟ್ನಲ್ಲಿ ಸಸಿ ನೆಟ್ಟ ಅಬುಧಾಬಿ ದೊರೆಗಳ ಮೂರನೇ ತಲೆಮಾರಿನವರಾಗಿದ್ದಾರೆ.
1992 ರಲ್ಲಿ ಯುಎಇಯ ಸಂಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಭಾರತಕ್ಕೆ ಭೇಟಿ ನೀಡಿದಾಗ ಅಮಲ್ಟಾಸ್ ಸಸಿಯನ್ನು ನೆಟ್ಟಿದ್ದರು. 2016 ರಲ್ಲಿ, ಅವರ ಮಗ, ಪ್ರಸ್ತುತ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮೊಲ್ಶ್ರೀ ಸಸಿಯನ್ನು ನೆಡುವ ಮೂಲಕ ಈ ಸಂಪ್ರದಾಯವನ್ನು ಮುಂದುವರೆಸಿದ್ದರು.
ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ಇದಾಗಿದೆ.
ಕ್ರೌನ್ ಪ್ರಿನ್ಸ್ ಇಂದು ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ಪರಮಾಣು ಶಕ್ತಿ, ನೈಸರ್ಗಿಕ ಅನಿಲ, ತೈಲ ಮತ್ತು ಆಹಾರದ ಕುರಿತು ಅನೇಕ ಒಪ್ಪಂದಗಳಿಗೆ ಸಹಿ ಹಾಕಿದರು.
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಮುರ್ಮು ಅವರು, ಭಾರತ ಮತ್ತು ಯುಎಇ ಹೊಸ ಸಹಕಾರ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳ ಮೂಲಕ ಇನ್ನೂ ಮುಂದೆ ನೋಡುತ್ತಿರುವ ಐತಿಹಾಸಿಕ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.