– ವಿವಿ ವಿದ್ಯಾರ್ಥಿಗಳು, ಹಿಂದುಪರ ಸಂಘಟನೆಗಳ ಆಕ್ರೋಶ
– ಗೋರಿ ತೆರವುಗೊಳಿಸದಿದ್ದರೆ, ಆಗಸ್ಟ್ 10 ರಂದು ನೆಲಸಮ ಮಾಡುತ್ತೇವೆ
ಕಲಬುರಗಿ: ಕಡಗಂಚಿ ಬಳಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (Kalaburagi Central University) ಕ್ಯಾಂಪಸ್ಸಿನಲ್ಲಿ ಅನಧಿಕೃತವಾಗಿ ಮುಸ್ಲಿಂ ಸಮುದಾಯದ (Muslim Community) ಗೋರಿ (ಮಜರ್) ನಿರ್ಮಾಣ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಕಡಗಂಚಿಯ ಬಳಿ 600 ಎಕರೆ ಪ್ರದೇಶದಲ್ಲಿ ಹರಡಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ಸಮುದಾಯದ ಎರಡು ಗೋರಿ (ಮಜರ್) ನಿರ್ಮಾಣ ಮಾಡಲಾಗಿದ್ದು, ಅನಧಿಕೃತವಾಗಿ ಮೂರನೇ ಮಜರ್ಗೆ (Mazar) ಸಿದ್ದತೆಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ. ರಾತ್ರೋ ರಾತ್ರಿ ವಿವಿಯ ಕ್ಯಾಂಪಸ್ಸಿನಲ್ಲಿ ಬಂದು ಗೋರಿಯ ಸುತ್ತಮುತ್ತಲೂ ಕಲ್ಲಿನ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ.
ಈಗಾಗಲೇ ಕೇಂದ್ರಿಯ ವಿವಿಯ ಕ್ಯಾಂಪಸ್ಸಿನಲ್ಲಿ ಎರಡು ಗೋರಿಗಳು ಪತ್ತೆಯಾಗಿದ್ದು, ಗೋರಿಗಳಿಗೆ ಮುಸ್ಲಿಂ ಸಮುದಾಯ ವಿದ್ಯುತ್ ವ್ಯವಸ್ಥೆ ಕೂಡ ಕಲ್ಪಿಸಿಕೊಂಡಿದೆ. ಅನಧಿಕೃತ ವಿದ್ಯುತ್ ಬಳಸಿಕೊಂಡು, ಗೋರಿಯ ಸುತ್ತಮುತ್ತ ಕಾಂಪೌಂಡ್ ನಿರ್ಮಾಣ ಮಾಡಿದ್ದನ್ನು ಕಂಡಿರುವ ವಿವಿಯ ವಿದ್ಯಾರ್ಥಿಗಳು, ಹಿಂದುಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಅನಧಿಕೃತ ಗೋರಿ ನಿರ್ಮಾಣದ ಸ್ಥಳದಲ್ಲಿನ ವಿದ್ಯುತ್ ವ್ಯವಸ್ಥೆಯನ್ನು ಇದೀಗ ವಿವಿಯ ಆಡಳಿತ ಮಂಡಳಿ ಕಡಿತಗೊಳಿಸಿದೆ. ಇದನ್ನೂ ಓದಿ: ಪತಿಯನ್ನು ಪತ್ನಿಯೇ ನದಿಗೆ ತಳ್ಳಿದ ಕೇಸ್ಗೆ ಟ್ವಿಸ್ಟ್; ಬಾಲ್ಯವಿವಾಹ ಕೇಸಲ್ಲಿ ನಾಪತ್ತೆಯಾಗಿದ್ದ ಗಂಡ ಅರೆಸ್ಟ್
ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಈ ರೀತಿ ಅನಧಿಕೃತ ಗೋರಿಗಳ ನಿರ್ಮಾಣ ಮಾಡಿರುವ ಕುರಿತು ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ವಿಶ್ವವಿದ್ಯಾಲಯದ ಉಪಕಲಪತಿಗಳು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಹಲವು ಬೆಳವಣಿಗೆ ಕಂಡುಬರುತ್ತಿವೆ. 600 ಎಕ್ರೆ ವಿವಿಯಲ್ಲಿ ಆಗಿಂದಾಗ ಕೆಲವು ದುರ್ಘಟನೆ ನಡೆದಿದ್ದು. ಇದರ ಮುಂದುವರೆದ ಭಾಗವಾಗಿ ಇಂದು ಕ್ಯಾಂಪಸ್ಸಿನಲ್ಲಿ ಅನಧಿಕೃತವಾಗಿ ಮುಸ್ಲಿಮರು ಗೋರಿಗಳ ನಿರ್ಮಾಣ ಮಾಡುತ್ತಿರುವುದು ನಮಗೆ ತಿಳಿದುಬಂದಿದೆ. ಈಗಾಗಲೇ ಯಾರ ಅನುಮತಿಯೂ ಇಲ್ಲದೆ 10-15 ಅಡಿ ಎತ್ತರದಲ್ಲಿ ಅನಧಿಕೃತ ಮಜರ್ ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನ; ಗುಂಡಿ 6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು
ಶೈಕ್ಷಣಿಕ ಕೇಂದ್ರವಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಅನಧಿಕೃತವಾಗಿ ಗೋರಿ ನಿರ್ಮಾಣ ಮಾಡುವ ಮೂಲಕ ಅಲ್ಲಿ ನಮಾಜ್ ಕೂಡ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಬಂದಿದೆ. ಅಲ್ಲಿಯ ಮುಸ್ಲಿಮರು, ವಿವಿಯ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದುಲ್ ಮಜರ್ ಇವರ ಕುಮ್ಮಕ್ಕಿನಿಂದ ಹಾಗೂ ಕೆಲ ಮುಸ್ಲಿಂ ವಿದ್ಯಾರ್ಥಿಗಳು, ಹೊರಗಿನ ಹಳ್ಳಿಯ ಮುಸ್ಲಿಮರ ನೇತೃತ್ವದಲ್ಲಿ ಅನಧಿಕೃತ ದರ್ಗಾ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಆ.10ರ ಒಳಗೆ ನೆಲಸಮ ಮಾಡಿ:
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಾಲೆಯೊಂದರಲ್ಲಿ ಅನಧಿಕೃತ ಗೋರಿಯೊಂದನ್ನು ಇಟ್ಟಿದ್ದರು. ನಾರಾಯಣಪುರ ಬಸವಸಾಗರ ಅಣೆಕಟ್ಟಿನಲ್ಲಿ ಅನಧಿಕೃತ ಗೋರಿ ನಿರ್ಮಾಣ ಮಾಡಿದ್ದು ಇಲ್ಲಿಯವರೆಗೆ ತೆಗೆದಿಲ್ಲ. ಅದೇ ಮಾದರಿಯಲ್ಲಿ ವಿವಿಯ ಕ್ಯಾಂಪಸ್ಸಿನಲ್ಲಿ ಗೋರಿ ನಿರ್ಮಾಣ ಮಾಡಿದ್ದಾರೆ. ಕೂಡಲೇ, ಜಿಲ್ಲಾಡಳಿತ ಎಚ್ಚೆತ್ತು ವಿವಿಯಲ್ಲಿ ನಿರ್ಮಾಣ ಮಾಡಲಾದ ಗೋರಿಯನ್ನು ನೆಲಸಮ ಮಾಡಬೇಕು. ಇಲ್ಲದಿದ್ದರೆ ಆ.10 ರಂದು ವಿವಿಯಲ್ಲಿನ ಅನಧಿಕೃತ ಗೋರಿಯನ್ನು ನೆಲಸಮ ಗೊಳಿಸಲಾಗುವುದು ಎಂದು ಹಿಂದೂ ಸಂಘಟನೆಗಳು ತಿಳಿಸಿವೆ.