ಧಾರವಾಡ: ಧಾರವಾಡ ಗ್ರಾಮೀಣ (Dharawada Rural) ಕ್ಷೇತ್ರದ ಹಾಲಿ ಶಾಸಕನ ವಿರುದ್ಧ ತೊಡೆ ತಟ್ಟಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಒಂದೇ ವಾಹನದಲ್ಲಿ ಬಂದು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಇಂದು ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಎರಡು ನಾಮಪತ್ರ ಪಕ್ಷೇತರವಾಗಿ ನೀಡಿರೋದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದನ್ನೂ ಓದಿ: ಯಾರು ತೆರೆಯುತ್ತಾರೆ ಬೆಂಗಳೂರಿನ ಹೆಬ್ಬಾಗಿಲು?
ಕಳೆದ 2018 ರ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಅಮೃತ ದೇಸಾಯಿ (Amruta Desai) ಅವರೊಂದಿಗೆ ನಿಂತು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಇಂದು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಗಮನಾರ್ಹ ವಿಷಯ ಏನಂದ್ರೆ, ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಇಬ್ಬರೂ ಸಹ ಒಂದೇ ವಾಹನದಲ್ಲಿ ಮೆರವಣಿಗೆ ಮೂಲಕ ಆಗಮಿಸಿ, ಬೇರೆ ಬೇರೆಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿಗೆ ಹಿನ್ನಡೆಯಾಗುತ್ತಾ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಎಲೆಕ್ಷನ್ ಹೊತ್ತಿನಲ್ಲೇ ಡಿಕೆಶಿಗೆ ಶಾಕ್ – CBI ತನಿಖೆಗೆ ಕೋರ್ಟ್ ಅಸ್ತು