ಕೋಲಾರ: ಬೆಟ್ಟದ ಮೇಲಿರುವ ಪುಟ್ಟ ಹಳ್ಳಿಯಲ್ಲಿ ಕಳೆದ ರಾತ್ರಿ ಅಚಾನಕ್ಕಾಗಿ ನಡೆದ ಕ್ಷುಲ್ಲಕ ಗಲಾಟೆ ಇಡೀ ಹಳ್ಳಿಯಲ್ಲಿ ಜನರನ್ನು ಆತಂಕಕ್ಕೆ ದೂಡಿದೆ. ಗ್ರಾಮದಲ್ಲಿ ಪೊಲೀಸ್ ಕಣ್ಗಾವಲು ಹಾಕಿ ಗ್ರಾಮಸ್ಥರಿಗೆ ರಕ್ಷಣೆ ನೀಡುವಂತ ಸ್ಥಿತಿ ನಿರ್ಮಾಣವಾಗಿದೆ.
ಗುಂಪು ಘರ್ಷಣೆಯಿಂದ ಹಲ್ಲೆಗೊಳಗಾಗಿರುವ ಮಹಿಳೆಯರು, ಯುವಕರು ಒಂದೆಡೆಯಾದರೆ, ಇನ್ನೊಂದಡೆ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದಾರೆ. ಮತ್ತೊಂದು ಗುಂಪಿನ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಕಂಡುಬಂದಿದೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR
ಏನಿದು ಘಟನೆ?
ಶನಿವಾರ ರಾತ್ರಿ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ತೇರಹಳ್ಳಿ ಬೆಟ್ಟದ ಮೇಲೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಎರಡೂ ಗುಂಪಿನ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಗಲಾಟೆಗೆ ಕಾರಣವೇನು? ಅನ್ನೋದಾದ್ರೆ ನಿನ್ನೆ ರಾತ್ರಿ 8.30 ರ ಸುಮಾರಿಗೆ ತೇರಹಳ್ಳಿ ಗ್ರಾಮದಿಂದ ಹೊರಗೆ ನಾಲ್ಕೈದು ಯುವಕರಿಗೂ, ಮಾಲೂರಿನಿಂದ ಬಂದಿದ್ದ ಕೆಲವರಿಗೂ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.
ಈ ವೇಳೆ ಮಾಲೂರಿನಿಂದ ಬಂದಿದ್ದ ಕೆಲವರು ಬೆಟ್ಟದಿಂದ ಕೆಳಗೆ ಹೋಗಿ ತಮ್ಮ ಬೆಂಬಲಿಗರನ್ನು ಕರೆತಂದು ಏಕಾಏಕಿ ಗ್ರಾಮದಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾರೆ. ಏಕಾಏಕಿ ಗುಂಪಿನ ದಾಳಿಯಿಂದ ಗಾಬರಿಯಾದ ತೇರಹಳ್ಳಿ ಗ್ರಾಮದ ಜನರು ದಾಳಿಗೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಗ್ರಾಮದ ಐದಾರು ಜನರು ಗಾಯಗೊಂಡಿದ್ದಾರೆ. ಆದರೆ ದಾಳಿ ಮಾಡಿದ್ದೇಕೆ ಅನ್ನೋದು ಗ್ರಾಮಸ್ಥರಿಗೆ ಗೊತ್ತಿಲ್ಲ. ಗ್ರಾಮದ ಹೊರಗಿನ ಬೆಟ್ಟದಲ್ಲಿ ನಡೆದ ಗಲಾಟೆಗೂ ಗ್ರಾಮಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಅನವಶ್ಯಕವಾಗಿ ಬಂದ ಒಂದು ಗುಂಪು ಗ್ರಾಮದಲ್ಲಿ ಹಲ್ಲೆ ಮಾಡಿದೆ ಅನ್ನೋದು ಗ್ರಾಮಸ್ಥರ ಮಾತು.
ಎರಡು ಗುಂಪುಗಳ ಗಲಾಟೆ ವೇಳೆ ಗ್ರಾಮದ ಮನೆಗಳಿಗೆ ನುಗ್ಗಿ ಕೆಲವರು ಹಲ್ಲೆ ಮಾಡಿರುವುದು ಒಂದೆಡೆಯಾದರೆ, ಗುಂಪು ಘರ್ಷಣೆ ವೇಳೆ ದಾಳಿ ಮಾಡಲು ಬಂದಿದ್ದ ಸುಮಾರು 10 ಕ್ಕೂ ಹೆಚ್ಚು ಜನ ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಪರಿಣಾಮ ಯುವಕರು ಕೋಲಾರದ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವವರು ಹೇಳುವ ಪ್ರಕಾರ ಬೆಟ್ಟದ ಮೇಲೆ ಹೋಗಿ ಬರುವಾಗ ಗ್ರಾಮದ ಕೆಲವರು ನಮ್ಮ ವಾಹನ ಅಡ್ಡಗಟ್ಟಿ ಹಣ ಒಡವೆ ಕೇಳಿದ್ದಾರೆ. ಆಗ ಹೊರಗಿನಿಂದ ಬೇರೆ ಜನರನ್ನು ಕರೆಸಿಕೊಂಡು ರಕ್ಷಣೆ ಪಡೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಟೈರ್ ಕೆಳಗೆ ಸಿಕ್ಕ ನೋಟ್ ತೆಗೆದುಕೊಳ್ಳಲು ವ್ಯಕ್ತಿ ಸರ್ಕಸ್
ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ. ಎರಡೂ ಗುಂಪುಗಳು ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ದೂರು ಪ್ರತಿದೂರು ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿಜಕ್ಕೂ ಆಗಿದ್ದೇನು ಅನ್ನೋದರ ಕುರಿತು ತನಿಖೆ ಕೈಗೊಂಡಿದ್ದಾರೆ.
ಒಟ್ನಲ್ಲಿ ಈಗಾಗಲೇ ತೇರಹಳ್ಳಿ ಬೆಟ್ಟಕ್ಕೆ ಹೊರಗಿನಿಂದ ಜನರು ಬಂದು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಿ ನಿರ್ಬಂಧ ಹಾಕಲಾಗಿತ್ತು. ಈ ಮಧ್ಯೆ ಬೆಟ್ಟದ ಗಲಾಟೆಯಿಂದ ಪೊಲೀಸರು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡು ಜನರ ರಕ್ಷಣೆ ನೀಡಬೇಕಿದೆ.