ತುಮಕೂರು: ಕೊನೆಯ ಹಂತದ ಚುನಾವಣೆ ನಾಳೆ ನಡೆಯಲಿದ್ದು, ರಿಸಲ್ಟ್ ಗೆ ಇನ್ನೈದು ದಿನ ಮಾತ್ರ ಬಾಕಿ ಇದೆ. ಹೀಗಿರೋವಾಗ ಅತಂತ್ರ ಪರಿಸ್ಥಿತಿ ಬಂದರೆ ಪ್ರಧಾನಿ ಹುದ್ದೆಗೇರಲು ಹಲವು ನಾಯಕರು ಹವಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ದೇವೇಗೌಡರಿಗೆ ಮತ್ತೆ ಪ್ರಧಾನಿಯಾಗುವ ಯೋಗ ಇದೆ. ಮೋದಿ ಈ ಬಾರಿ ಪ್ರಧಾನಿ ಹುದ್ದೆಗೇರಲ್ವಾ ಅನ್ನೋ ಪ್ರಶ್ನೆ ಮೂಡಿದೆ.
ಹೌದು. ತಿಪಟೂರು ತಾಲೂಕಿನ ದಸರೀಘಟ್ಟದ ಚೌಡೇಶ್ವರಿ ಅಮ್ಮನವರ ಕ್ಷೇತ್ರ ಕಳಸ ಬರಹದ ಭವಿಷ್ಯಕ್ಕೆ ಖ್ಯಾತಿ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಲಿರುವ ಭವಿಷ್ಯವನ್ನು ಚೌಡೇಶ್ವರಿ ದೇವಿ ನುಡಿದಿತ್ತು. ಅದೇ ರೀತಿ ಗೌಡರು ಪ್ರಧಾನಿ ಹುದ್ದೆಯಲ್ಲಿರುವಾಗ ಶ್ರೀಕ್ಷೇತ್ರದ ಉತ್ಸವಕ್ಕೆ ಗೈರಾಗಿದ್ದಕ್ಕೆ ಚೌಡೇಶ್ವರಿ ಅಮ್ಮ ಮುನಿಸಿಕೊಂಡಿದ್ದರಂತೆ. ಪರಿಣಾಮ ಅಕ್ಕಿಯ ಮೇಲೆ ಕಳಸದಿಂದ ಬರೆದ ದೇವಿ, ದೇವೇಗೌಡರು 11 ತಿಂಗಳ ಬಳಿಕ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿತ್ತಂತೆ.
ಅಷ್ಟೇ ಅಲ್ಲ ಮೋದಿ ಪ್ರಧಾನಿ ಆಗುತ್ತಾರೆ ಅನ್ನೋದನ್ನು ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಚೌಡೇಶ್ವರಿ ಅಮ್ಮ ಕಳಸ ಬರಹದ ಮೂಲಕ ಹೇಳಿತ್ತು. ನಂತರ ಸ್ವತಃ ಮೋದಿಯವರೇ ಅಮ್ಮನವರ ಕಳಸ ಹೊತ್ತಿದ್ದರು. ಅಮ್ಮನವರ ಹೇಳಿಕೆಯಂತೆ ಮೋದಿ ಪ್ರಧಾನಿಯಾದರು ಎಂದು ಚೌಡೇಶ್ವರಿ ಸೇವಕ ಕೃಷ್ಣೆಗೌಡ ಹೇಳಿದರು.
ಆದರೆ ಮೋದಿಯವರು ಪ್ರಧಾನಿ ಆದ ಬಳಿಕ 3 ಬಾರಿ ತುಮಕೂರು ಜಿಲ್ಲೆಗೆ ಬಂದು ಹೋಗಿದ್ದಾರೆ. ಒಮ್ಮೆಯೂ ಶ್ರೀಕ್ಷೇತ್ರ ದಸರೀಘಟ್ಟಕ್ಕೆ ಭೇಟಿಕೊಟ್ಟಿಲ್ಲ. ಹಾಗಾಗಿ ದೇವೇಗೌಡರಂತೆ ಮೋದಿಯವರೂ ಅವಕೃಪೆಗೆ ಒಳಗಾಗಬಹುದು ಎಂಬ ಚರ್ಚೆ ಶುರುವಾಗಿದೆ. ಇನ್ನೊಂದೆಡೆ ದಸರಿಘಟ್ಟ ಕ್ಷೇತ್ರದ ಶ್ರೀಗಳಾದ ಚಂದ್ರಶೇಖರನಂದನಾಥ ಸ್ವಾಮಿಜಿಗಳ ಪ್ರಕಾರ ಈ ಬಾರಿ ದೇವೇಗೌಡರ ಯೋಗ ಚೆನ್ನಾಗಿದೆ. ಹಾಗಾಗಿ ಉನ್ನತಮಟ್ಟಕ್ಕೆ ಮತ್ತೆ ಏರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಟ್ಟಿನಲ್ಲಿ ಚೌಡೇಶ್ವರಿ ಅಮ್ಮನವರ ಪೀಠ ಈಗ ವಿಶ್ರಾಂತಿಯಲ್ಲಿದೆ. ಹಾಗಾಗಿ ಯಾವುದೇ ಪ್ರಶ್ನೆ ಕೇಳಲು ಸಾಧ್ಯವಾಗುತ್ತಿಲ್ಲ. ಮೇ 21ರಂದು ಮೋದಿ ಕುರಿತು ಪ್ರಶ್ನೆ ಕೇಳಲು ಸನ್ನಿಧಾನದವರು ಮುಂದಾಗಿದ್ದಾರೆ.