ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ನಾಯಕ ಸಮುದಾಯದ ನಾಯಕರನ್ನ ತುಳಿಯುವ ಪ್ರಯತ್ನ ಮಾಡಬಾರದು ಎಂದು ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಹಾಗೂ ಸಿಎಂ ಅವರಿಗೆ ನಾಯಕ ಸಮುದಾಯದ ಮತ ಬೇಕು. ಹೀಗಾಗಿ ಕೆ.ಎನ್.ರಾಜಣ್ಣರಂತಹ ನಾಯಕರನ್ನು ತುಳಿಯುವ ಕೆಲಸಕ್ಕೆ ಕೈ ಹಾಕಬಾರದು ಎಂದು ಸ್ವಾಮೀಜಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಒಂದು ಸರ್ಕಾರದಲ್ಲಿ ಏನಾದರೂ ಬದಲಾವಣೆಯಾಗುತ್ತದೆ ಎಂಬ ಲಕ್ಷಣಗಳು ಕಂಡು ಬಂದರೆ ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಹೀಗಾಗಿ ಯಾವುದೇ ಸರ್ಕಾರ ಬರಲಿ ಅಥವಾ ಯಾರೇ ಮುಖ್ಯಮಂತ್ರಿಯಾಗಲಿ ನಮ್ಮ ಸಮುದಾಯದ ಬೇಡಿಕೆಗಳನ್ನು ಸಿಎಂ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ ಕಾರಣ ಎಂಬ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ರಾಜಣ್ಣರನ್ನು ಉಚ್ಛಾಟನೆ ಮಾಡಲು ಸರ್ಕಾರ ತೆರೆಮರೆಯ ಕಸರತ್ತು ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಸ್ವಾಮೀಜಿ ಮಾತನಾಡಿ ಅಪ್ಪ-ಮಗನ ವಿರುದ್ಧ ಕಿಡಿಕಾರಿದ್ದಾರೆ.