ತುಮಕೂರು: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ ಇನ್ನೂ ದೋಸ್ತಿ ಸರ್ಕಾರದಲ್ಲಿ ತುಮಕೂರು ಬಂಡಾಯ ಶಮನವಾಗಿಲ್ಲ. ಹೀಗಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದ ದೋಸ್ತಿ ಅಭ್ಯರ್ಥಿಯಾಗಿ ಈಗಾಗಲೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಈ ಮಧ್ಯೆ ಮದ್ದಹನುಮೇಗೌಡ ಅವರು, ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನವನ್ನು ಕೂಡಲೇ ಸರಿಪಡಿಸದಿದ್ದರೆ ಪರಿಸ್ಥಿತಿ ಸರಿ ಇರಲ್ಲ ಎಂದು ಜೆಡಿಎಸ್ ನಾಯಕರು ಕಾಂಗ್ರೆಸ್ಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಮುದ್ದುಹನುಮೇಗೌಡರ ರೆಬೆಲ್ ಫೈಟ್ ದೋಸ್ತಿಗೆ ಭಂಗ ತರುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಒಂದು ವೇಳೆ ಮುದ್ದಹನುಮೇಗೌಡರ ಬಂಡಾಯ ಶಮನವಾಗದಿದ್ದರೆ ಮೈತ್ರಿಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
ಇತ್ತ ಮುದ್ದ ಹನುಮೇಗೌಡರ ಮನವೊಲಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಮುದ್ದ ಹನುಮೇಗೌಡರಿಗೆ ಕೆ.ಎನ್.ರಾಜಣ್ಣ ಸಾಥ್ ನೀಡಿದ್ದಾರೆ. ದೇವೇಗೌಡರಿಗೆ ಕೈ ರೆಬೆಲ್ಸ್ ನಾಯಕರಿಂದ ತೊಂದರೆ ಆದರೆ ಮೈತ್ರಿಗೆ ತೊಂದರೆ ಆಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಎಚ್ಡಿಡಿಗೆ ಕಾಂಗ್ರೆಸ್ನಿಂದ ತೊಂದರೆ ಅನ್ನೋ ಮೇಸೆಜ್ ಹೋದರೆ ಕಷ್ಟವಾಗಲಿದೆ. ಹೀಗಾಗಿ ಕಾಂಗ್ರೆಸ್ನಿಂದ ಮುದ್ದ ಹನುಮೇಗೌಡರ ಮನವೊಲಿಕೆ ಯತ್ನ ನಡೆಸಲಾಗುತ್ತಿದ್ದು, ಇಂದು ಸಂಧಾನ ಸಭೆ ನಡೆಯೋ ಸಾಧ್ಯತೆಗಳಿವೆ ಎನ್ನಲಾಗಿದೆ.