ತುಮಕೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಕೊರಟಗೆರೆ ಬಿಜೆಪಿ ಅಭ್ಯರ್ಥಿ ವೈ ಎಚ್ ಹುಚ್ಚಯ್ಯ ಲೋಫರ್ ಎಂದು ಅವಾಚ್ಯವಾಗಿ ಬೈಯುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಕೊರಟಗೆರೆ ಕ್ಷೇತ್ರದ ಹರಿಯಪ್ಪನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಹುಚ್ಚಯ್ಯ ಕ್ಷೇತ್ರದ ಜನರಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಪರಮೇಶ್ವರ್ ಬೆಂಬಲಿಗ ಹಾಗೂ ದಲಿತ ಮುಖಂಡ ರಾಜು ಎನ್ನುವವರು ಮಧ್ಯಪ್ರವೇಶಿಸಿ ಸದಾಶಿವ ಆಯೋಗ ವರದಿಗೆ ವಿರೋಧ ವ್ಯಕ್ತಪಡಿಸಿದಕ್ಕೆ ಸಾಕ್ಷ್ಯ ಕೊಡಿ ಎಂದು ಹುಚ್ಚಯ್ಯ ರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಿಡಿಮಿಡಿಗೊಂಡ ಹುಚ್ಚಯ್ಯ ಆ ಲೋಫರ್ ಹೆಸರು ಹೇಳಬೇಡ ಎಂದಿದ್ದಾರೆ.
ಹುಚ್ಚಯ್ಯರ ಮಾತಿನಿಂದ ಆಕ್ರೋಶಗೊಂಡ ರಾಜು ಕೂಡಾ ಪ್ರತಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಹುಚ್ಚಯ್ಯ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರಿಗೆ ದೂರು ಕೊಡಲು ಪರಮೇಶ್ವರ್ ಬೆಂಬಲಿಗರು ಸಜ್ಜಾಗಿದ್ದಾರೆ.