ತುಮಕೂರು: ಖಾಸಗಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಸಮೀಪದ ಕಂಬದಹಳ್ಳಿ ಗೇಟ್ ಬಳಿ ನಡೆದಿದೆ.
ಬುಕ್ಕಾಪಟ್ಟಣ ಮೂಲದವರಾದ ತಿಮ್ಮಣ್ಣ (60) ಹಾಗೂ ಬಸವರಾಜ್(32) ಮೃತ ದುರ್ದೈವಿಗಳು. ಬುಕ್ಕಾಪಟ್ಟಣದ ಕಡೆಯಿಂದ ಶಿರಾ ಕಡೆಗೆ ಖಾಸಗಿ ಬಸ್ ಹೋಗುತಿತ್ತು. ಇತ್ತ ಬಸವರಾಜ್ ಅವರು ತಂದೆಯ ಜೊತೆಗೆ ಶಿರಾ ಕಡೆಯಿಂದ ಬುಕ್ಕಾಪಟ್ಟಣಕ್ಕೆ ಬರುತ್ತಿದ್ದರು. ಈ ವೇಳೆ ಕಂಬದಹಳ್ಳಿ ಬಳಿ ಇರುವ ತಿರುವಿನ ಸಮೀಪದಲ್ಲಿ ನಿಯಂತ್ರಣ ತಪ್ಪಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.
ಬಸ್ ಚಾಲಕ ಅತಿ ವೇಗದಲ್ಲಿ ಚಾಲನೆ ಮಾಡಿದ್ದು ಹಾಗೂ ತಿರುವು ಅಪಘಾಕ್ಕೆ ಕಾರಣ ಎನ್ನಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಹಾಗೂ ಖಾಸಗಿ ಬಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.