ಮುಂಬೈ: ಸೋದರರಿಬ್ಬರು ಕಳೆದ 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಜೊತೆಯಾಗಿ ಊಟ ಮಾಡಿಕೊಂಡು ಬರುತ್ತಿದ್ದಾರೆ. ಮೊದಲಿಗೆ ಐದು ಜನ ಸೋದರರು ಜೊತೆಯಾಗಿಯೇ ಊಟ ಮಾಡುತ್ತಿದ್ದರು. ಐವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಪ್ರತಿನಿತ್ಯ ಜೊತೆಯಾಗಿ ಊಟ ಮಾಡುತ್ತಿದ್ದಾರೆ.
ಮುಂಬೈ ನಗರದ ವ್ಯಾಪಾಗಳಾದ ಪ್ರಕಾಶ್ ಚಂದ್ (70) ಮತ್ತು ಪುಷ್ಪರಾಜ್ ಚಂದ್ (66) ಜೊತೆಯಾಗಿ ಊಟ ಮಾಡಿಕೊಂಡು ಬರುವ ಪದ್ಧತಿಯನ್ನು ಇಂದಿಗೂ ಜೀವಂತವಾಗಿರಿಸುವ ಮೂಲಕ ಸೋದರ ವಾತ್ಸಲ್ಯಕ್ಕೆ ತಾಜಾ ಉದಾಹರಣೆಯಾಗಿದ್ದಾರೆ.
ಮೂಲತಃ ರಾಜಸ್ಥಾನದ ಬಿಸಲಾಪುರದ ನಿವಾಸಿಯಾದ ರಾಮ್ಲಾಲ್ ಜೈನ್ 1962ರಲ್ಲಿ ವ್ಯಾಪಾರ ನಿಮಿತ್ತ ಮುಂಬೈ ನಗರಕ್ಕೆ ಆಗಮಿಸಿದ್ದರು. ಸಣ್ಣ-ಪುಟ್ಟ ಕೆಲಸದ ಜೊತೆಗೆ ತಮ್ಮದೇ ಸ್ವಂತ ಟ್ರಾನ್ಸ್ ಪೋರ್ಟ್ ಸಂಸ್ಥೆ ಆರಂಭಿಸಿದ್ದರು. ವ್ಯವಹಾರದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಸೋದರರಿಬ್ಬರನ್ನು ಮುಂಬೈಗೆ ಕರೆಸಿಕೊಳ್ಳುತ್ತಾರೆ. ಹಾಗೆ ರಾಮ್ಲಾಲ್ ತಮ್ಮ ಕೊನೆಯ ಸೋದರರನ್ನು ಕರೆಸಿಕೊಳ್ಳುತ್ತಾರೆ. ಹೀಗೆ ಸೋದರರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಅಂದಿನಿಂದ ಐವರು ಸದಸ್ಯರು ಪ್ರತಿನಿತ್ಯ ಜೊತೆಯಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡೋದನ್ನು ರೂಡಿಸಿಕೊಳ್ಳುತ್ತಾರೆ. ಮೂವರು ಸೋದರರು ಸಾವನ್ನಪ್ಪಿದ ಬಳಿಕವೂ ಪ್ರಕಾಶ್ ಮತ್ತು ಪುಷ್ಪರಾಜ್ ಊಟದ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಮಧ್ಯಾಹ್ನದ ಊಟವನ್ನು ಪ್ರಕಾಶ್ ಚಂದ್ ಮನೆಯಲ್ಲಿ, ರಾತ್ರಿ ನನ್ನ ನಿವಾಸದಲ್ಲಿ ನಾವು ಊಟ ಮಾಡುತ್ತೇವೆ. ಕೆಲಸದ ನಿಮಿತ್ತ ಇಬ್ಬರಲ್ಲಿ ಒಬ್ಬರು ಬರೋದು ತಡವಾದ್ರೆ ಒಬ್ಬರಿಗೊಬ್ಬರು ಕಾದು ಕೊನೆಗೆ ಜೊತೆಯಾಗಿಯೇ ಆಹಾರ ಸೇವಿಸುತ್ತೇವೆ ಎಂದು ಪುಷ್ಪರಾಜ್ ಹೇಳುತ್ತಾರೆ.
ಪುಷ್ಪರಾಜ್ ಕಳೆದ 9 ವರ್ಷಗಳಿಂದ ವಾರದಲ್ಲಿ ಕೆಲವು ದಿನ ಉಪವಾಸ ಕೈಗೊಳ್ಳುತ್ತಾರೆ. ಉಪವಾಸದ ಮರುದಿನ ಸೋದರ ಬರೋವರೆಗೂ ಊಟ ಮಾಡಲ್ಲ ಎಂದು ಪುಷ್ಪರಾಜ್ ಪತ್ನಿ ಪವನಬೆನ್ ತಿಳಿಸುತ್ತಾರೆ.