ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

Public TV
2 Min Read
Indian Football Team

ಭುವನೇಶ್ವರ: ಭಾರತೀಯ ಫುಟ್ಬಾಲ್‌ ತಂಡವು (Indian Football Team) ಇಂಟರ್‌ಕಾಂಟಿನೆಂಟಲ್ ಕಪ್ ನಗದು ಬಹುಮಾನವಾಗಿ ಪಡೆದ ಹಣದಲ್ಲಿ 20 ಲಕ್ಷ ರೂ.ಗಳನ್ನ ಬಾಲಸೋರ್ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಕುಟುಂಬಗಳಿಗೆ ದೇಣಿಯಾಗಿ ನೀಡಿದೆ. ಈ ಮೂಲಕ ಕಪ್‌ ಗೆಲ್ಲುವ ಜೊತೆಗೆ ಭಾರತೀಯರ ಮನವನ್ನೂ ಗೆದ್ದಿದೆ.

ODISHA TRAIN ACCIDENT 1 1

ಚಾಂಪಿಯನ್‌ ಪಟ್ಟ ಗೆದ್ದ ನಂತರ ಸಿಕ್ಕ ನಗದು ಪ್ರಶಸ್ತಿಯ ಒಂದು ಭಾಗವನ್ನ ಒಡಿಶಾ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ʻಪರಿಹಾರ ಮತ್ತು ಪುನರ್ವಸತಿʼ ಕಾರ್ಯಕ್ಕಾಗಿ ದಾನ ಮಾಡಲು ಭಾರತೀಯ ಫುಟ್ಬಾಲ್‌ ತಂಡ ನಿರ್ಧರಿಸಿದೆ. ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಂದಲೂ ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು 

ಭಾನುವಾರ ಒಡಿಶಾದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 2-0 ಗೋಲುಗಳಿಂದ ಎದುರಾಳಿ ಲೆಬನಾನ್ ತಂಡವನ್ನ ಮಣಿಸಿತು. ಈ ಮೂಲಕ 2ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಫೈನಲ್‌ ಪಂದ್ಯದಲ್ಲಿ ಗೆದ್ದ ಭಾರತ ತಂಡಕ್ಕೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ (Naveen Patnaik) 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದರು. ಈ ಮೊತ್ತದಲ್ಲಿ 20 ಲಕ್ಷ ರೂ.ಗಳನ್ನ ದೇಣಿಗೆ ನೀಡಲು ಫುಟ್ಬಾಲ್‌ ತಂಡ ಸಾಮೂಹಿಕ ನಿರ್ಧಾರ ಮಾಡಿತು.  

Indian Football Team 2

ಗೆಲುವಿಗೆ ಬಹುಮಾನವಾಗಿ ನಗದು ಬೋನಸ್ ನೀಡುತ್ತಿರುವುದಕ್ಕೆ ಒಡಿಶಾ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವೆಲ್ಲರೂ ತ್ವರಿತ ಮತ್ತು ಸಾಮೂಹಿಕ ನಿರ್ಧಾರವೊಂದಕ್ಕೆ ಬಂದಿದ್ದೇವೆ. ಈ ಮೊತ್ತದಲ್ಲಿ 20 ಲಕ್ಷ ರೂ.ಗಳನ್ನ ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಈ ಹಣವನ್ನು ನೀಡಲಾಗುತ್ತದೆ ಎಂದು ಭಾರತೀಯ ಫುಟ್ಬಾಲ್ ತಂಡ ಟ್ವೀಟ್ ಟ್ವೀಟ್‌ ಮೂಲಕ ತಿಳಿಸಿದೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

odisha train accident

ಅದೇ ರೀತಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಕೂಡಾ, ರೈಲು ದುರಂತದಿಂದ ಸಾವನ್ನಪ್ಪಿದವರ ಕುಟುಂಬಸ್ಥರ ನೆರವಿಗೆ ಬಂದಿದ್ದಾರೆ. ದುರಂತ ಅಪಘಾತದಲ್ಲಿ ಜೀವ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದೇ ತಿಂಗಳ ಜೂನ್‌ 2ರ ರಾತ್ರಿ ಓಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ದುರಂತ ನಡೆದಿತ್ತು.

Share This Article