-ಒಬ್ಬರ ಕೈಯನ್ನೊಬ್ಬರು ಹಿಡಿದು ಮರ ಹತ್ತಿಳಿದ ಪ್ರಯಾಣಿಕರು
ಚಿಕ್ಕಮಗಳೂರು: ಮಳೆ-ಗಾಳಿ ಇಲ್ಲದಿದ್ದರೂ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ಒಂದು ಗಂಟೆಗೂ ಹೆಚ್ಚು ಸಮಯ ರಾಜ್ಯ ಹೆದ್ದಾರಿ ಬಂದ್ ಆಗಿದ್ದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ತಲ್ಲಮಕ್ಕಿ ಬಳಿ ನಡೆದಿದೆ.
ಬೃಹತ್ ಮರ ಬೀಳೋದು ಐದೇ ಐದು ಸೆಕೆಂಡ್ ತಡವಾಗಿದ್ದರೆ ಆಟೋ ಚಾಲಕ ಹಾಗೂ ಅದರಲ್ಲಿದ್ದ ಇಬ್ಬರು ಪ್ರಯಾಣಿಕರ ಮೇಲೆ ಬೀಳುತ್ತಿತ್ತು. ಆದರೆ ಮರ ಬೀಳೋದನ್ನ ಕಂಡ ಆಟೋ ಚಾಲಕ ಬ್ರೇಕ್ ಹಾಕಿದ್ದರಿಂದ ಆಟೋ ಚಾಲಕ ಸೇರಿ ಮೂವರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೃಹತ್ ಮರ ಧರೆಗುರುಳಿದ್ದರಿಂದ ರಾಜ್ಯ ಹೆದ್ದಾರಿ ಕೊಪ್ಪ-ಶೃಂಗೇರಿ ಮಾರ್ಗ ಗಂಟೆಗೂ ಹೆಚ್ಚು ಕಾಲ ಬಂದ್ ಆಗಿತ್ತು. ಈ ಮಾರ್ಗದ ಪ್ರಯಾಣಿಕರು ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಮರ ಹತ್ತಿಳಿದು ಬೇರೆ ವಾಹನಗಳಲ್ಲಿ ಹೋಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೊಪ್ಪ ಪೊಲೀಸರು ಸ್ಥಳೀಯರ ಸಹಕಾರದಿಂದ ಮರವನ್ನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.