– ಬಂದ್ ಇದ್ದರೂ ಯಾವುದೇ ಸೇವೆಯಲ್ಲಿ ವ್ಯತ್ಯಯ ಇಲ್ಲ
ನವದೆಹಲಿ/ಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು (Trade Unions) ಇಂದು ಭಾರತ್ ಬಂದ್ಗೆ (Bharat Bandh) ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಬಂದ್ ನಡೆಯುತ್ತಿದ್ದು, ರಾಜ್ಯದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಐಎನ್ಟಿಯುಸಿ, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್ಇಡಬ್ಲ್ಯೂಎ, ಎಐಸಿಸಿಟಿಯು, ಎಲ್ಪಿಎಫ್ ಮತ್ತು ಯುಟಿಯುಸಿ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಪ್ರತಿಭಟನೆಯ ಕಹಳೆ ಮೊಳಗಿಸಲಿವೆ. ಈ ಕಾರ್ಮಿಕ ರೈತ ಸಂಘಟನೆಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ ಸಂಪೂರ್ಣ ಬೆಂಬಲ ನೀಡಿವೆ. ಭಾರತ್ ಬಂದ್ಗೆ ಕರೆ ನೀಡಿದ್ರೂ ರಾಜ್ಯದಲ್ಲಿ ಬಹುತೇಕ ಸೇವೆಗಳು ಸಿಗಲಿದ್ದು, ಎಂದಿನಂತೆ ಎಲ್ಲವೂ ಸಹಜವಾಗಿಯೇ ಇರಲಿದೆ.
ಭಾರತ್ ಬಂದ್; ಏನಿರಲಿದೆ?
-ಬಸ್
-ರೈಲು
-ಆಟೋ, ಕ್ಯಾಬ್
-ಮೆಟ್ರೋ
-ಅಂಗಡಿ ಮುಂಗಟ್ಟು
-ಶಾಲೆ ಕಾಲೇಜು
ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು ಪ್ಲಾನ್ ಮಾಡಿವೆ. ಇಂದು ಬೆಳ್ಳಿಗ್ಗೆ 11 ಗಂಟೆಗೆ ಟೌನ್ ಹಾಲ್ನಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯ ಕಾರ್ಮಿಕ ಸಂಘಟನೆಗಳು ಅಥವಾ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ನ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟಿವೆ.
ಪ್ರಮುಖ ಬೇಡಿಕೆಗಳೇನು?
-ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು
-ನರೇಗಾ ಯೋಜನೆ ಪುನರ್ ಸ್ಥಾಪನೆ, ವಿಜಿ ರಾಮ್ ಜಿ ಕಾಯ್ದೆ ರದ್ದು
-ಭೂಸ್ವಾಧೀನ ಕಾಯ್ದೆ, ಬೀಜ ಮಸೂದೆ ಕಾಯ್ದೆ ಹಿಂಪಡೆಯಬೇಕು
-ವಿದ್ಯುತ್ ಖಾಸಗೀಕರಣ ಬೇಡ
-ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಿ
ಹೀಗೆ 9 ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನೂ ರಾಜ್ಯದಲ್ಲಿ ಕನಿಷ್ಟ ವೇತನ ಪರಿಷ್ಕ್ರರಣೆಯಾಗಬೇಕೆಂಬ ಪ್ರಮುಖ ಬೇಡಿಕೆ ಇಡಲಾಗಿದೆ. ಇನ್ನು ಮುಷ್ಕರಕ್ಕೆ ಬೆಂಗಳೂರು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಕೂಡಾ ಬೆಂಬಲಿಸಿದೆ. ಆಟೋ, ಟ್ಯಾಕ್ಸಿ ಹಾಗೂ ಸಾರಿಗೆ ಚಾಲಕರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟಿದೆ. ಆದ್ರೆ ಇವತ್ತು ಆಟೋ ಬಂದ್ ಇರೋದಿಲ್ಲ. ಆಟೋ ಚಾಲಕರು ಕೇವಲ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಆಟೋ ಯೂನಿಯನ್ ಡಿಮ್ಯಾಂಡ್:
-ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಸುಗ್ರೀವಾಜ್ಞೆ ಮೂಲಕ ನಿಷೇಧಿಸಬೇಕು
-ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ -2019 ವಾಪಸ್ ಪಡೆಯಬೇಕು
-ಚಾಲಕರ ಮೇಲಿನ ಹಿಟ್ ಆಂಡ್ ರನ್ ಕೇಸ್ ವಾಪಸ್ ಪಡೆಯಬೇಕು
-ಸಾರಿಗೆ ಚಾಲಕರ ಕಲ್ಯಾಣ ಮಂಡಳಿಗೆ 500 ಕೋಟಿ ಅನುದಾನ ನೀಡಬೇಕು
-ಅನಧಿಕೃತ ಓಲಾ, ಊಬರ್, ನಮ್ಮ ಯಾತ್ರಿ, ಆಪ್ ವ್ಯವಸ್ಥೆ ರದ್ದುಗೊಳಿಸಬೇಕು
-ಆಟೋ ಚಾಲಕರಿಗೆ ಪ್ರತಿ ತಿಂಗಳು 25 ಸಾವಿರ ಸಹಾಯಧನ ನೀಡಬೇಕು
-ಸರ್ಕಾರದ ವತಿಯಿಂದಲೇ ಒಂದು ಆಪ್ ರಚಿಸಬೇಕೆಂದು ಒತ್ತಾಯ
ಹೀಗೆ ವಿವಿಧ ಬೇಡಿಕೆಗಳನ್ನು ಆಟೋ ಯೂನಿಯನ್ ಮುಂದಿಟ್ಟಿದೆ. ಒಟ್ಟಿನಲ್ಲಿ ಇಂದಿನ ಭಾರತ್ ಬಂದ್ ಎಫೆಕ್ಟ್ ಪ್ರಮುಖವಾಗಿ ಕೈಗಾರಿಕೆಗಳ ಮೇಲೆ ತಟ್ಟೋ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಬಿಎಸ್ಎನ್ಎಲ್ ಹಾಗೂ ವಿಮಾ ಸಂಘಟನೆಗಳು ಸೇವೆ ಸ್ಥಗಿತಗೊಳಿಸೋ ಹೇಳಿಕೆ ನೀಡಿವೆ. ಇದನ್ನು ಹೊರತುಪಡಿಸಿ ಜನರ ಸೇವೆಯಲ್ಲಿ ಯಾವುದೇ ವ್ಯತ್ಯಯವಿಲ್ಲ.

