ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ಅಲ್ಲಿನ ನಿವಾಸಿಗಳ ಆರೋಗ್ಯವನ್ನು ಹದಗೆಡಿಸುತ್ತಿದೆ. ಒಂದೆಡೆ ವಾಯು ಮಾಲಿನ್ಯವಾದರೆ, ಇನ್ನೊಂದೆಡೆ ಯಮುನಾ ನದಿ ವಿಷಕಾರಿ ನೊರೆಯಿಂದ ತುಂಬಿಕೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಹೌದು, ದೆಹಲಿ ಇತ್ತೀಚೆಗೆ ಮಾಲಿನ್ಯದ ರಾಜಧಾನಿಯಾಗಿ ಬದಲಾಗುತ್ತಿದೆ. ಒಂದೆಡೆ ವಾಹನದ ಹೊಗೆ, ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದ ವಾಯು ಮಾಲಿನ್ಯವಾಗಿ ಸಂಪೂರ್ಣ ನಗರ ಹೊಗೆಯಿಂದ ತುಂಬಿಕೊಂಡಿದೆ. ಇನ್ನೊಂದೆಡೆ ಜಲ ಮಾಲಿನ್ಯದಿಂದ ಯಮುನಾ ನದಿಯನ್ನು ವಿಷಕಾರಿ ನೊರೆ ಆವರಿಸಿಕೊಂಡಿದೆ. ಈ ವಿಷಕಾರಿ ನೊರೆ, ದುರ್ನಾತ ನಡುವೆಯೇ ಭಾನುವಾರ ಸಾವಿರಾರು ಭಕ್ತರು ಯಮುನಾ ನದಿ ತೀರದಲ್ಲಿ ನಿಂತು ಛತ್ ಪೂಜೆ ನೆರವೇರಿಸಿದ್ದಾರೆ.
ಮಲಿನಗೊಂಡ ಯಮುನಾ ನದಿಯ ನೀರಿನಲ್ಲಿ ಭಕ್ತರು ಪೂಜೆ ನೆರವೇರಿಸುತ್ತಿರುವ ಫೋಟೋಗಳನ್ನು ನೋಡಿದರೆ ಜನರು ಯಾವುದೋ ಹಿಮ ಬೀಳುವ ಸ್ಥಳದಲ್ಲಿ ಪೂಜೆ ಮಾಡುತ್ತಿದ್ದಾರೆ. ಈ ಸ್ಥಳ ಎಷ್ಟು ಚೆನ್ನಾಗಿದೆ ಎಂದು ಅನಿಸಬಹುದು. ಆದರೆ ಅಸಲಿಗೆ ಫೋಟೋಗಳಲ್ಲಿ ಕಾಣುತ್ತಿರುವುದು ಹಿಮವಲ್ಲ ವಿಷಕಾರಿ ನೊರೆ ಎನ್ನುವುದು ಆಘಾತಕಾರಿ ವಿಷಯವಾಗಿದೆ.
ರಾಜಧಾನಿ ನೀರಿಗಾಗಿ ಯಮುನಾ ನದಿಯನ್ನೇ ಅವಲಂಬಿಸಿದೆ. ಆದರೆ ಯಮುನಾ ನದಿ ದೇಶದಲ್ಲಿಯೇ ಅತ್ಯಂತ ಮಲಿನಗೊಂಡ ನದಿಯಾಗಿರುವುದು ವಿಪರ್ಯಾಸ. ನಗರದ 19 ಒಳಚರಂಡಿಗಳ ನೀರು ಯಮುನೆಗೆ ಬಂದು ಸೇರುತ್ತಿದೆ. ಇದರಿಂದಲೇ 96% ಯಮುನಾ ನದಿ ಮಲಿನಗೊಂಡಿದೆ. ಇದರಲ್ಲಿ 5% ದಷ್ಟು ಮಾತ್ರ ನೀರನ್ನು ಸಂಸ್ಕರಿಸಲು ಸಾಧ್ಯವಾಗುತ್ತಿದ್ದು ಇದು ನಗರ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಛತ್ ಪೂಜೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು ಕೂಡ ಭಾಗಿಯಾಗಿದ್ದರು. ಛತ್ ಪೂಜೆ ನೆರವೆರಿಸಲೆಂದೇ ಸರ್ಕಾರ ಯಮುನಾ ನದಿಯ ಸುತ್ತ 1,100 ಘಾಟ್ಗಳ ವ್ಯವಸ್ಥೆ ಮಾಡಿತ್ತು.
ನಗರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ಕೇಜ್ರಿವಾಲ್ ಮಾತನಾಡಿ, ಪ್ರಸ್ತುತ ಸ್ಥಿತಿ ಅಸಹನೀಯವಾಗಿದೆ. ನಗರವಾಸಿಗಳು ಅವರದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಉಸಿರಾಡಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದ್ದಾರೆ. ದೆಹಲಿಯಲ್ಲಿ ಇಂದಿನಿಂದ ಸಮಬೆಸ ಸಂಖ್ಯೆಗಳ ನಿಯಮ ಜಾರಿಯಾಗಿದೆ. ಅಲ್ಲದೆ ಹೆಚ್ಚಾಗಿರುವ ಮಾಲಿನ್ಯದ ಪರಿಣಾಮ ಮಂಗಳವಾರದವರೆಗೂ ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಫರೀದಾಬಾದ್ನಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Delhi in a bigg pollution hazard ???????? ,,, be careful who are in Delhi!!!!!! ???????? pic.twitter.com/nCkoV9TopG
— Anvesh (@Anvesh55526744) November 4, 2019