ಬಳ್ಳಾರಿ: ಚುನಾವಣೆ ಘೋಷಣೆಯಾದ ದಿನದಿಂದ ಎಟಿಎಂಗಳಲ್ಲಿ ಹಣವೇ ಸಿಗುತ್ತಿರಲಿಲ್ಲ. ಆದರೆ ಈಗ ಎಟಿಎಂಗಳಲ್ಲಿ ಹರಿದ ನೋಟುಗಳು ಸಿಗುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಡಗಲಿ ತಾಲೂಕಿನ ಹೊಳಲು ಗ್ರಾಮದ ಎಸ್.ಬಿ.ಐ ಬ್ಯಾಂಕ್ ನ ಎಟಿಎಂ ನಲ್ಲಿ ಗ್ರಾಹಕರೊಬ್ಬರಿಗೆ ಹರಿದು ನೋಟುಗಳು ಬಂದಿರುವುದು ಪತ್ತೆಯಾಗಿದೆ. ಐದು ನೂರು ಮುಖಬೆಲೆಯ ಹತ್ತಾರು ಹರಿದ ನೋಟುಗಳು ಕಂಡುಬಂದಿದ್ದು, ಸಾರ್ವಜನಿಕರನ್ನು ತಲ್ಲಣಗೊಳಿಸಿವೆ.
ಗ್ರಾಮಸ್ಥರಾದ ರಾಮಾಚಾರಿ ಎಟಿಎಂ ನಲ್ಲಿ ಎರಡು ಸಾವಿರ ಹಣ ಡ್ರಾ ಮಾಡಿದ್ದಾರೆ. ಆದರೆ ಈ ವೇಳೆ ಮೂರು ಹರಿದ ಐದು ನೂರು ರೂಪಾಯಿಯ ನೋಟುಗಳು ಎಟಿಎಂನಲ್ಲಿ ದೊರೆತಿವೆ. ನಂತರ ಮತ್ತೊಬ್ಬ ಗ್ರಾಹಕರು ಐದುಸಾವಿರ ಹಣವನ್ನು ಡ್ರಾ ಮಾಡಿದ್ದಾರೆ. ಅವರಿಗೂ ಕೂಡ ನಾಲ್ಕೈದು ಹರಿದ ಹಾಗೂ ತೇಪೆ ಹಚ್ಚಿದ ನೋಟುಗಳು ಬಂದಿವೆ.
ಇದರಿಂದ ಆತಂಕಗೊಂಡ ಗ್ರಾಹಕರು ಬ್ಯಾಂಕಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಡುವಂತೆ ಕೇಳಿದ್ದಾರೆ. ಬ್ಯಾಂಕ್ ವ್ಯವಹಾರ ರಹಿತ ದಿನವಾಗಿರುವುದರಿಂದ ನಾಳೆ ಬದಲಾವಣೆ ಮಾಡಿಕೊಡುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
ಹೀಗಾಗಿ ನಮ್ಮ ಹಣವನ್ನು ತಾವೂ ತೆಗೆದುಕೊಳ್ಳುವ ವೇಳೆ ಈ ರೀತಿಯಾದರೆ ಹೇಗೆ ಅಂತಾ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.