ನವದೆಹಲಿ: ಸಾರ್ವತ್ರಿಕ ಚುನಾವಣೆ (Election) ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಂಡಿರುವ ಬಿಜೆಪಿ (BJP), ಸೀಟ್ ನಿಗದಿ ಸಂಬಂಧ ಆಂತರಿಕ ಕಸರತ್ತನ್ನು ತೀವ್ರಗೊಳಿಸಿದೆ. ಪಕ್ಷದಿಂದ ಟಿಕೆಟ್ ನೀಡಿಕೆಗೆ ಅರ್ಹತೆ, ಮಾನದಂಡ, ಅನುಸರಿಸಬೇಕಾದ ವಿಧಾನಗಳನ್ನ ಅಖೈರು ಮಾಡುವ ಸಂಬಂಧ ಮಹತ್ವದ ಸಭೆ ನಡೆಸಿದೆ.
ಹಾಲಿ ಸಂಸದರ ಕಾರ್ಯವೈಖರಿ, ರಿಪೋರ್ಟ್ ಕಾರ್ಡನ್ನ ಪರಿಶೀಲಿಸಿದೆ. ವಿವಿಧ ಏಜೆನ್ಸಿಗಳ ಮೂಲಕ ಕ್ಷೇತ್ರ ಮಾಹಿತಿ ತರಿಸಿಕೊಂಡು ಆಂತರಿಕ ಸಮೀಕ್ಷೆಗಳ ಜೊತೆ ತಾಳೆ ಹಾಕ್ತಿದೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವಾಗ ಕೇವಲ ಕಾರ್ಯವೈಖರಿಯನ್ನಷ್ಟೇ ನೋಡದೇ ಅವರ ವ್ಯಕ್ತಿತ್ವ, ಸೋಷಿಯಲ್ ಮೀಡಿಯಾದಲ್ಲಿ (Social Media) ಅವರಿಗಿರುವ ಫಾಲೋಯಿಂಗ್ ಸೇರಿ ಹಲವು ವಿಚಾರಗಳನ್ನ ಬಿಜೆಪಿ ಹೈಕಮಾಂಡ್ ಪರಿಶೀಲಿಸುತ್ತಿದೆ.
ಕಳೆದ ಬಾರಿ ಸೋತಿದ್ದ 166 ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ವಿಶೇಷ ತಂತ್ರ ರೂಪಿಸಿತ್ತು. ಈ ಬಾರಿ ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಕರ್ನಾಟಕ, ತಮಿಳುನಾಡು (Tamilnadu) ಮತ್ತು ತೆಲಂಗಾಣದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇಲ್ಲಿ ಹೆಚ್ಚು ಸ್ಥಾನ ಗಳಿಸಲು ಮೋದಿಯನ್ನು ಫೀಲ್ಡಿಗೆ ಇಳಿಸುವ ಬಗ್ಗೆ ಚಿಂತನೆ ನಡೆಸಿದೆ. ವಾರಣಾಸಿ ಮಾತ್ರವಲ್ಲದೇ ತಮಿಳುನಾಡಿನ ಕನ್ಯಾಕುಮಾರಿ ಅಥವಾ ಕೋಯಮತ್ತೂರು ಲೋಕಸಭಾ ಕ್ಷೇತ್ರದಿಂದ ಮೋದಿ ಸ್ಪರ್ಧೆ ಮಾಡುವ ಸಂಭವ ಇದೆ. ಇದನ್ನೂ ಓದಿ: ಫಾರಿನ್ನಿಂದ ಬಂದ ಹೆಚ್ಡಿಕೆಯಿಂದ ಮಿಡ್ನೈಟ್ ಬಾಂಬ್?: ಮೆಸ್ನಲ್ಲಿ ನಡೆದ ಸಭೆಯಲ್ಲಿ YST!
ಕಾಂಗ್ರೆಸ್ನಿಂದಲೂ ಭರ್ಜರಿ ತಯಾರಿ:
ಇನ್ನೂ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಹ ಈಗಿನಿಂದಲೇ ಭರದ ಸಿದ್ಧತೆ ನಡೆಸ್ತಿದೆ. ಇದರ ಭಾಗವಾಗಿ ನಾಳೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ಸಭೆ ನಡೆಸಲಿದೆ. ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್, ಬಿ.ಆರ್ ಪಾಟೀಲ್, ಸಚಿವ ಚಲುವರಾಯಸ್ವಾಮಿ ಸೇರಿ ಹಲವರು ದೆಹಲಿಗೆ ಹೋಗಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ತಡೆಯಾಜ್ಞೆ – ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದ ಸಿಎಂ
ಶನಿವಾರ ಹೈವೋಲ್ಟೇಜ್ ಮೀಟಿಂಗ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ (ಆ.5) ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎರಡು ಹಂತದಲ್ಲಿ ಸಭೆ ನಡೆಯಲಿದೆ. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನ ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದ್ದು, ಇದಕ್ಕೆ ಸಂಬಂಧಿಸಿ ನಾಳೆಯ ಸಭೆಯಲ್ಲಿ ಕಾರ್ಯತಂತ್ರಗಳು ರೂಪುಗೊಳ್ಳಲಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಲ್ಲಿ ಯಾವ ತಂತ್ರ ಅನುಸರಿಸಬೇಕು? ವಿಪಕ್ಷಗಳು ಮೈತ್ರಿ ಮಾಡಿಕೊಳ್ಳದೇ ಕಣಕ್ಕೆ ಇಳಿದಲ್ಲಿ ಏನು ಮಾಡಬೇಕು? ಎಂಬ ಬಗ್ಗೆ ಚರ್ಚೆಗಳು ನಡೆಯಲಿವೆ.
Web Stories