ಬೆಂಗಳೂರು: ಟಾಲಿವುಡ್ ನಟ ರಾಮ್ಚರಣ್ ತೇಜ ಹಾಗೂ ಜೂ.ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ ಆರ್ಆರ್ಆರ್ ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ.
ಬಹುಬಲಿ ನಿರ್ದೇಶಕ ರಾಜಮೌಳಿ ಇದೇ ಮೊದಲ ಬಾರಿಗೆ ತೆಲುಗಿನ ಇಬ್ಬರು ಸ್ಟಾರ್ ನಟರಿಗೆ ಒಂದೇ ಸಿನಿಮಾದಲ್ಲಿ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ನತ್ತ ಮುಗಿಬೀಳುತ್ತಿದ್ದಾರೆ. ಅಲ್ಲದೇ ರಾಮ್ಚರಣ್ ಹಾಗೂ ಜೂ.ಎನ್ಟಿಆರ್ ಕಟೌಟ್ಗಳಿಗೆ ಹಾರ ಹಾಕಿ, ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್ಗಿದೆ ಕಂಟಕ
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಅಂಜನ್ ಚಿತ್ರ ಮಂದಿರದಲ್ಲಿ ತಡರಾತ್ರಿ 12:30ಕ್ಕೆ ಆರ್ಆರ್ಆರ್ ಮೊದಲ ಶೋ ಬಿಡುಗಡೆಯಾಗಿದ್ದು, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಂಜನ್ ಥಿಯೇಟರ್ ಆವರಣದಲ್ಲಿ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಅಭಿಮಾನಿಗಳ ಪರಸ್ಪರ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಅಲ್ಲದೇ ನಗರದ 14ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ರಾತ್ರಿ 12 ಹಾಗೂ ಬೆಳಿಗ್ಗೆ 4 ಗಂಟೆಗೆ ಮೊದಲ ಶೋ ಪ್ರದರ್ಶನ ಕಂಡಿದೆ.
ಬಾಹುಬಲಿ ಸಿನಿಮಾ ನಂತರ ರಾಜಮೌಳಿ ಅವರು ಆರ್ಆರ್ಆರ್ ಸಿನಿಮಾವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಜೂ.ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ ಮತ್ತು ಬಾಲಿವುಡ್ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್ ಸೇರಿದಂತೆ ಹಲವಾರು ಕಲಾವಿದರು ಆರ್ಆರ್ಆರ್ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ
ಡಿವಿವಿ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಆರ್ಆರ್ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಿದೆ.