ಕಾರವಾರ: ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂದು ಹೆಂಡತಿ ಗಂಡನನ್ನು ಬಿಟ್ಟು ಹೋದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಾರವಾರದ ಸುಂಕೇರಿ ಗ್ರಾಮದ ಗೀತಾ ಪ್ರೇಮಾನಂದ ಮಾಹಲೆ ಪತಿಯನ್ನು ಬಿಟ್ಟು ಹೋಗಿದ್ದಾರೆ. ಐದು ವರ್ಷದ ಹಿಂದೆ ಗೀತಾ ಅವರು ಕ್ಷೌರಿಕ ವೃತ್ತಿ ಮಾಡುವ ಯುವಕನನ್ನು ಮದುವೆಯಾಗಿದ್ದರು. ಮನೆಯಲ್ಲಿ ಟಾಯ್ಲೆಟ್ ಇರಲಿಲ್ಲ. ಹೇಗೂ ಹೊಂದಾಣಿಕೆ ಮಾಡಿಕೊಂಡು ಆತನೊಂದಿಗೆ ಸಂಸಾರ ಮಾಡುತ್ತಿದ್ದರು. ಬಳಿಕ ಪತ್ನಿ ಗಂಡನಿಗೆ ಟಾಯ್ಲೆಟ್ ಕಟ್ಟಿಸುವಂತೆ ಮನವೊಲಿಸಿದ್ದಾರೆ.
ಇದಕ್ಕೆ ಒಪ್ಪಿದ ಆಕೆಯ ಪತಿ ಕಾರವಾರದ ನಗರಸಭೆಗೆ ಅರ್ಜಿ ಸಹ ನೀಡಿದ್ದಾರೆ. ಆದರೆ ಅರ್ಜಿ ಕೊಟ್ಟು 2 ವರ್ಷಗಳು ಕಳೆದರೂ ಟಾಯ್ಲೆಟ್ ಮಾತ್ರ ನಗರಸಭೆಯಿಂದ ಮಂಜೂರಾಗಲಿಲ್ಲ. ಇದಕ್ಕೆ ಸಾಲದೆಂಬಂತೆ ಈ ಬಾರಿಯ ಮಳೆಗೆ ಇದ್ದ ಒಂದು ಮನೆಯೂ ಕುಸಿದು ಹೋಗಿದ್ದು, ಇರಲು ಸೂರು ಕೂಡ ಇಲ್ಲದಂತಾಗಿದೆ. ಆದರೂ ಆಕೆ ಆತನೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ ಬಯಲು ಶೌಚಕ್ಕೆ ಹೋಗಲು ಇಷ್ಟವಾಗದೇ ತನ್ನ ಪುಟ್ಟ ಮಗುವಿನೊಂದಿಗೆ ಮನೆಬಿಟ್ಟು ತೆರಳಿದ್ದು, ಮನೆ ಕಟ್ಟಿಸಲಾಗದಿದ್ದರೂ ಕೊನೆ ಪಕ್ಷ ಟಾಯ್ಲೆಟ್ ಕಟ್ಟುವಂತೆ ಹೇಳಿ ತೆರಳಿದ್ದಾರೆ.
ಇದರಿಂದ ಮನನೊಂದ ಪತಿ ನಗರಸಭೆಗೆ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಅವರ ಮನವಿಗೆ ಸ್ಪಂದಿಸದೇ ಅಸಡ್ಡೆ ತೋರುತ್ತಿದ್ದಾರೆ. ಒಂದು ಟಾಯ್ಲೆಟ್ ಈತನ ಕುಟುಂಬವನ್ನೇ ಬೇರ್ಪಡಿಸಿದ್ದು, ಯಾತನೆಯ ಬದುಕು ಸಾಗಿಸುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv