ಬೆಂಗಳೂರು: ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ ಎಂದು ಮೊಳಕಾಲ್ಮೂರು ಶಾಸಕರಾದ ಶ್ರೀರಾಮುಲು ಅವರು ಪತ್ರ ಬರೆಯುವ ಮೂಲಕ ಮಾಜಿ ವಿದೇಶಾಂಗ ಸಚಿವೆ, ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಶ್ರೀರಾಮುಲು ಅವರು ಪತ್ರದಲ್ಲಿ, ಸುಷ್ಮಾ ಸ್ವರಾಜ್ ಇಂದು ನಮ್ಮೊಂದಿಗೆ ಇಲ್ಲ. ಅವರ ಅಗಲಿಕೆ ನಮ್ಮನ್ನು ಅನಾಥರನ್ನಾಗಿದೆ. ಇಷ್ಟು ಬೇಗ ಸುಷ್ಮಾ ಅವರು ನಮ್ಮನ್ನು ಅಗಲಿ ಹೋಗುತ್ತಾರೆ ಎಂದು ಊಹಿಸಿರಲಿಲ್ಲ. ಬಳ್ಳಾರಿಗೂ ಸುಷ್ಮಾ ಅವರಿಗೂ ಅವಿನಾಭಾವ ಸಂಬಂಧ ಇದೆ. ನಮ್ಮನ್ನು ಅವರು ತಮ್ಮ ಮಕ್ಕಳಂತೆ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ತಾಯಿ ಅವರು. ನಾವು ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ. ಗೌರಿ ಹಬ್ಬ, ವರಮಹಾಲಕ್ಷ್ಮೀ ಹಬ್ಬ ಬಂತು ಎಂದರೆ ಬಳ್ಳಾರಿಯಲ್ಲಿ ಸಡಗರ ಶುರುವಾಗುತ್ತಿತ್ತು. ಇಡೀ ಬಳ್ಳಾರಿಯ ಜನ ಅವರನ್ನು ಅಮ್ಮ ಎಂದೇ ಕರೆಯುತ್ತಿದ್ದರು. ಅವರಿಗೂ ಬಳ್ಳಾರಿ ನೆಲದ ಮೇಲೆ ಅಗಾಧ ಪ್ರೀತಿ ಇತ್ತು. ಬಳ್ಳಾರಿಯಲ್ಲಿ ಎಷ್ಟೋ ಬಾರಿ ಅವರು ಕನ್ನಡದಲ್ಲಿ ಭಾಷಣ ಮಾಡಿದ್ದು, ಇದೆ. ಇಂದು ನಮ್ಮ ಮನೆ ಅಮ್ಮನಿಲ್ಲದ ಮನೆಯಂತಾಗಿದೆ.
ಭಾರತ ಅನೇಕ ಶ್ರೇಷ್ಠ ನೇತಾರರನ್ನು ಕಂಡಿದೆ, ಆದರೆ ಮಾತೃಹೃದಯದ, ಮಮತೆಯ ವ್ಯಕ್ತಿರೂಪವಾಗಿದ್ದ, ತಾಯಿ ಪ್ರತೀಕವಾಗಿದ್ದ ಸುಷ್ಮಾಜೀ ಅವರಿಗೆ ಸರಿಸಾಟಿಯಾಗಬಲ್ಲವರು ಯಾರೂ ಇಲ್ಲ. ಇಂದು ಸುಷ್ಮಾಜೀ ಅವರನ್ನು ಕಳೆದುಕೊಂಡು ನಾನು ಮಾತ್ರವಲ್ಲ, ನನ್ನಂಥ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಮಾತೃಶೋಕದಲ್ಲಿದ್ದೇವೆ, ಅನಾಥರಾಗಿದ್ದೇವೆ. #SushmaSwaraj
— B Sriramulu (@sriramulubjp) August 7, 2019
ನಾವು ರಾಜಕಾರಣಿಗಳ ಮಕ್ಕಳಲ್ಲ. ನಾವು ರಾಜಕೀಯ ಪ್ರವೇಶಕ್ಕೆ ಸುಷ್ಮಾ ಸ್ವರಾಜ್ ಅವರೇ ಕಾರಣ. ನಮ್ಮ ಸೇವೆ ಸಮಾಜಕ್ಕೆ ಬಹಳ ಇದೆ ಎಂದು ಅವರು ಅರಿವು ಮೂಡಿಸಿ ರಾಜಕಾರಣಕ್ಕೆ ನಮ್ಮನ್ನು ರಾಜಕರಾಣಕ್ಕೆ ತಂದವರು. ಹಾಗಾಗಿ ಸಾಮಾನ್ಯ ಕುಟುಂಬದಲ್ಲಿ ಬೆಳೆದ ನಾವು ಇಂದು ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದ್ದೇವು. ಅವರ ಪ್ರೀತಿ, ವಾತ್ಸಲ್ಯವನ್ನು ಉಸಿರು ಇರುವ ತನಕ ಮರೆತುವ ಹಾಗಿಲ್ಲ. ಅಲ್ಲದೆ ಸುಷ್ಮಾ ಅವರು ಬಳ್ಳಾರಿಯಿಂದ ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧೆ ಕೂಡ ಮಾಡಿದ್ದರು ಎಂದರು.
ನನ್ನನ್ನು ಸದಾ ಆಶೀರ್ವದಿಸುತ್ತಾ, ಕೈಹಿಡಿದು ನಡೆಸಿದ ತಾಯಿ ಸ್ವರೂಪರು ಇಂದು ನಮ್ಮೊಂದಿಗೆ ಇಲ್ಲ. ದುಃಖವನ್ನು ಹೇಳಲು ಪದಗಳು ಸಿಗುತ್ತಿಲ್ಲ. ಇತಿಹಾಸದಲ್ಲಿ ಮರೆಯಲಾಗದ ಸಾಧನೆ, ವ್ಯಕ್ತಿತ್ವ ಮತ್ತು ನೆನಪುಗಳನ್ನು ಬಿಟ್ಟು ಹೋಗಿರುವ ತಾಯಿ ಸುಷ್ಮಾಜೀಗೆ ನನ್ನ ಕೋಟಿಕೋಟಿ ನಮನಗಳು. ಅಮ್ಮ, ದೇವರು ನಿಮಗೆ ಸದ್ಗತಿಯನ್ನು ಕೊಡುವುದು ಖಂಡಿತ. ಓಂ ಶಾಂತಿ pic.twitter.com/bvD6ykzpok
— B Sriramulu (@sriramulubjp) August 7, 2019
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ, ಕೊಯ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಸಿಲುಕಿಕೊಂಡಾಗ ತಾಯಿ ಸುಷ್ಮಾ ಸ್ವರಾಜ್ ಕನ್ನಡಿಗರಂತೆಯೆ ಮಿಡಿದರು. ಪಾಕಿಸ್ತಾನದ ಅಧ್ಯಕ್ಷರಾಗಿದ್ದಾಗ ಮುಷರಫ್ ಅವರನ್ನು ಕೂಡ ತಣ್ಣಗಾಗಿದ್ದ ಗಟ್ಟಿಗಿತ್ತಿ ನಮ್ಮ ಸುಷ್ಮಾ ತಾಯಿ. ಹಿಂದೂ ಮುಸ್ಲಿಂ ಎಲ್ಲರನ್ನು ಭಾವೈಕ್ಯತೆ ಸಾರುತ್ತಿದ್ದವರು. ಇಂದಿರಾ ಗಾಂಧಿ ನಂತರ ನಮ್ಮ ಸುಷ್ಮಾ ಅಮ್ಮ ವಿದೇಶಾಂಗ ಸಚಿವೆಯಾಗಿದ್ದವರು. ವಿದೇಶಾಂಗ ಸಚಿವೆಯಾಗಿದ್ದಾಗ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದ ಅವರಿಗೆ ಇಡೀ ವಿಶ್ವವೇ ಬೆಂಬಲವಾಗಿ ನಿಂತಿತ್ತು. ವಿಶ್ವಸಂಸ್ಥೆಯಲ್ಲಿ ಕೂಡ ಅವರು ಭಯೋತ್ಪಾದನೆ ವಿರುದ್ಧ ಗುಡುಗಿದ್ದರು.
ಸುಷ್ಮಾ ಅವರ ವಾತ್ಸಲ್ಯದ ಹೃದಯದಿಂದಲೇ ‘ಸೂಪರ್ ಮಾಮ್ ಆಫ್ ಇಂಡಿಯಾ’ ಎಂಬ ಬಿರುದು ಪಡೆದಿದ್ದರು. ಅಂತ ವಾತ್ಸಲ್ಯಮಯಿ ಇಂದು ನಮ್ಮನ್ನು ಅಗಲಿದ್ದಾರೆ. ಅವರನ್ನು ಕಳೆದುಕೊಂಡ ನಾವು ಇಂದು ಅನಾಥ ಮಕ್ಕಳಂತೆ ಆಗಿದ್ದೇವೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಬರಿಸುವ ಶಕ್ತಿ ನೀಡಲಿ. ಅವರನ್ನು ಕಳೆದುಕೊಂಡ ನಾವು ಇಂದು ತಬ್ಬಲಿಗಳಾಗಿದ್ದೇವೆ. ನಾವು ಹೇಳೋದು ಒಂದೇ ನಮ್ಮ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಅಮ್ಮ ಮತ್ತೆ ಹುಟ್ಟಿ ಬರಲಿ ಎಂದು ಬೇಡಿಕೊಳ್ತೀನಿ.