ಬೆಂಗಳೂರು: ಹವಾಮಾನ ಇಲಾಖೆ ಇಂದು ಹಾಗೂ ಶುಕ್ರವಾರ ಬೆಂಗಳೂರಿಗೆ ಹಳದಿ ಅಲರ್ಟ್ ಘೋಷಿಸಿದೆ.
ಇಂದು ಮತ್ತು ನಾಳೆ ನಗರದಲ್ಲಿ 7 ರಿಂದ 11 ಸೆಂಟಿಮೀಟರ್ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೆ ತಮಿಳುನಾಡಿನ ಹತ್ತಿರ ಸೈಕ್ಲೋನಿಕ್ ಸರ್ಕ್ಯುಲೇಶನ್ ಇರುವುದರಿಂದ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಪೂರ್ವ ಭಾಗ, ಉತ್ತರ ಒಳನಾಡು, ಬೆಂಗಳೂರು ಗ್ರಾಮೀಣ, ಬೆಂಗಳೂರು ವ್ಯಾಪಕವಾದ ಭಾರೀ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರಾದ ರಾಜ ರಮೇಶ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿತ್ತು. ಕೆ.ಆರ್.ಪುರ ಮತ್ತು ಯಲಹಂಕ, ಸಿ.ವಿ.ರಾಮನ್ ನಗರ ಸುತ್ತಮುತ್ತ ಮತ್ತು ನಗರದ ಹಲವೆಡೆ ಮಳೆ ಸುರಿದಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ನಗರದ ಮಲ್ಲೇಶ್ವರಂ, ಯಶವಂತಪುರ, ಮತ್ತಿಕೆರೆ, ರಾಜಾಜಿನಗರ, ಕೆ.ಆರ್.ಪುರ, ಯಲಹಂಕ, ಸಿ.ವಿ ರಾಮನ್ ನಗರ, ಜಾಲಹಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕೆಲವಡೆ ಗುಡುಗು ಮಿಂಚು ಸಹಿತ ಮಳೆಯಾಗಿತ್ತು.