ತುಮಕೂರು: ಶಾಲಾ ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ಸ್ವತಃ ವಿದ್ಯಾರ್ಥಿಗಳೇ ವಿನೂತನವಾಗಿ ಗುಲಾಬಿ ಆಂದೋಲನ ನಡೆಸಿದ್ದಾರೆ.
ಅಂಗಡಿ ಮಾಲೀಕರಿಗೆ, ಗ್ರಾಹಕರಿಗೆ ಗುಲಾಬಿ ಹೂವು ಕೊಟ್ಟು ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ವಿಭಿನ್ನವಾಗಿ ಮನವಿ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆ ಆರೋಗ್ಯ ಇಲಾಖೆಯ ತಂಬಾಕು ನಿಯಂತ್ರಣ ಕೋಶದಿಂದ ಈ ವಿಶೇಷ ಗುಲಾಬಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ನೂರಾರು ವಿದ್ಯಾರ್ಥಿಗಳು ಕೈಜೋಡಿಸಿದರು. ಶಾಲಾ-ಕಾಲೇಜಿನ 100 ಮೀಟರ್ ಸುತ್ತಮುತ್ತ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನಗಳ ಮಾರಾಟ ಮತ್ತು ಸೇವನೆ ಮಾಡಬೇಡಿ ಎಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿಕೊಂಡರು.
ಈ ವಿನೂತನ ಗುಲಾಬಿ ಆಂದೋಲನದಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೋಗಿ, ತಂಬಾಕು ಸೇವನೆಯಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಚಂದ್ರಕಲಾ, ತಂಬಾಕು ನಿಯಂತ್ರಣ ಅಧಿಕಾರಿ ಡಾ.ಮೋಹನ್ ದಾಸ್ ಸೇರಿದಂತೆ ಹಲವು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.