ಕಾರವಾರ: 18ನೇ ತಾರೀಕಿನವರೆಗೆ ನಿಖಿಲ್ ಎಲ್ಲಿದೀಯಪ್ಪ ಎಂದು ಮಂಡ್ಯದಲ್ಲಿ ನಿಖಿಲ್ಗಾಗಿ ಹುಡುಕುತ್ತಾರೆ. ನಂತರ ಇಲ್ಲಿಗೆ ಬಂದು ಆನಂದ್ ಎಲ್ಲಿದೀಯಪ್ಪ ಎಂದು ಹುಡುಕುತ್ತಾರೆ. 18ನೇ ತಾರೀಕಿನ ನಂತರ ಕುಂಬಳಕಾಯಿ, ನಿಂಬೆಹಣ್ಣುಗಳು ಬರುತ್ತವೆ ಎಂದು ಕುಮಾರಸ್ವಾಮಿ, ರೇವಣ್ಣರವರನ್ನು ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆನಂದ್ ಆಸ್ನೋಟಿಕರ್ ನಾನು ಕುಲದೇವರು ಎಂದು ಒಂದು ಸಾರಿ ಹೇಳುತ್ತಾರೆ. ದೇಶಪಾಂಡೆ ಕುಲದೇವರು ಎಂದು ಹೇಳುತ್ತಾರೆ. ಅವರಿಗೆ ಎಷ್ಟು ಕುಲದೇವರಿದ್ದಾರೆ ಎಂದು ಗೊತ್ತಿಲ್ಲ ಎಂದರು.
ಪ್ರತಿ ವರ್ಷ ಕುಲದೇವರು ಬದಲಾಗುತ್ತೆ. ಇಂತವರು ಇಂದು ಬಂದು ವೋಟನ್ನು ಕೇಳುತ್ತಾರೆ. ಗೋಸುಂಬೆ ಹೇಗೆ ಬದಲಾಯಿಸುತ್ತದೆ ಹಾಗೆ ಬದಲಾಯಿಸುತ್ತಾರೆ. ಇಂದು ಒಂದು ಪಾರ್ಟಿ, ನಾಳೆ ಒಂದು ಪಾರ್ಟಿ. ಮುಂದಿನ ವರ್ಷ ಸೋತರೂ ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಆನಂದ್ ಆಸ್ನೋಟಿಕರ್ಗೆ ಟಾಂಗ್ ನೀಡಿದರು.
ಬಿಜೆಪಿ ಮುಖಂಡರ ಮನೆಗಳಿಗೆ ಐಟಿ ದಾಳಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ಎಲ್ಲೆಲ್ಲಿ ದಾಳಿ ಮಾಡಬೇಕೋ ಅಲ್ಲಲ್ಲಿ ದಾಳಿ ಮಾಡಲು ಅಧಿಕಾರವಿದೆ. ಇದಕ್ಕೆ ನಮ್ಮ ಸ್ವಾಗತ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಹುಡುಕಲಿ. ತಪ್ಪಿದ್ದರೇ ಯಾವುದನ್ನೂ ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದರು.