ಬಾಗಲಕೋಟೆ: ಟಿಕ್ಟಾಕ್ ಹುಚ್ಚಾಟದಿಂದ ಧಾರ್ಮಿಕ ದಾರ್ಶನಿಕರಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ.
ಯಲ್ಲಪ್ಪ ಹಳಬರ(19) ಹಾಗೂ ಭೀರಪ್ಪ ಜಕ್ಕಲಿ(21) ಪೊಲೀಸರ ವಶದಲ್ಲಿದ್ದಾರೆ. ಯುವಕರಿಬ್ಬರು ನಾಗರಾಳ ಎಸ್ಪಿ ಗ್ರಾಮ ನಿವಾಸಿಗಳಾಗಿದ್ದು, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿದ ರೀತಿಯಲ್ಲಿ ಟಿಕ್ಟಾಕ್ ಮಾಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಟಿಕ್ಟಾಕ್ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು
ಅಷ್ಟೇ ಅಲ್ಲದೇ ಯಲ್ಲಪ್ಪ ಒಂದು ಸಮುದಾಯದ ಭಾವನೆ ಕೆರಳಿಸುವ ತರಹ ಟಿಕ್ಟಾಕ್ ಮಾಡಿ ಅದನ್ನು ವಾಟ್ಸಪ್ ಸ್ಟೇಟಸ್ಗೆ ಇಟ್ಟುಕೊಂಡಿದ್ದನು. ಧಾರ್ಮಿಕ ಮುಖಂಡರಿಗೆ ಅವಮಾನ ಆಗುವ ಸ್ಟೇಟಸ್ ಹಾಕಬೇಡಿ ಎಂದು ಸ್ಥಳೀಯರು ತಿಳಿ ಹೇಳಿದ್ದರು. ಆದರೂ ಇಬ್ಬರು ಹಿರಿಯರ ಮಾತನ್ನು ಕೇಳಿರಲಿಲ್ಲ. ಕೊನೆಗೆ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಗುಳೇದಗುಡ್ಡ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.