– ಅರಣ್ಯ ಇಲಾಖೆಯ ಬೋನಿಗೆ ಬೀಳದ ಹುಲಿರಾಯ
– ರಾತ್ರಿ ನಿದ್ದೆ ಇಲ್ಲದೆ ಟಾರ್ಚ್ ಹಿಡಿದು ಹಸುಗಳನ್ನು ಕಾಯುವ ಕೆಲಸ
ಮಡಿಕೇರಿ: ವರ್ಷದ ಎಲ್ಲ ದಿನಗಳಲ್ಲೂ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು ಜಿಲ್ಲೆಯ ಜನರಿಗೆ ಇದೀಗ ಹುಲಿಯ ಹಾವಳಿ ಹೆಚ್ಚಾಗಿದ್ದು ಈಗ ವಿಪರೀತವಾಗಿದೆ.
ವಿರಾಜಪೇಟೆ ತಾಲೂಕಿನ ಸುತ್ತ ಕಳೆದ ಮೂರು ತಿಂಗಳಲ್ಲಿ ಹುಲಿ ದಾಳಿಗೆ 45 ಜಾನುವಾರುಗಳು ಬಲಿಯಾಗಿವೆ. ಇದು ಜನರನ್ನು ಆತಂಕಕ್ಕೆ ಉಂಟುಮಾಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟು ಕಾಯುತ್ತಿದೆ. ಕಳೆದ ಒಂದೇ ತಿಂಗಳಲ್ಲಿ 12ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ.
ವಿರಾಜಪೇಟೆ ತಾಲೂಕಿನ ಬಾಳೆಲೆ, ನಿಟ್ಟೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳನ್ನು ಟಾರ್ಗೆಟ್ ಮಾಡಿ ಹುಲಿ ದಾಳಿ ನಡೆಸಿ ತಿಂದು ಹಾಕುತ್ತಿದೆ. ಈ ವ್ಯಾಪ್ತಿಯಲ್ಲಿ ಕೇವಲ ಒಂದೇ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆಗಾಗಿ ಬೋನ್ ಇಟ್ಟಿದೆ. ಆದರೆ ಹುಲಿ ಬೋನ್ ಕಡೆ ಸುಳಿಯುತ್ತಲೇ ಇಲ್ಲ.
ಜನರು ಹುಲಿಯ ಆತಂಕದಿಂದ ರಾತ್ರಿ ಇಡೀ ಟಾರ್ಚ್ ಹಾಕಿ ಮನೆ ಸುತ್ತಾ ಜಾರುವಾರುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಹುಲಿ ದಾಳಿಯಿಂದಾಗಿ ಜಾರುವಾರುಗಳು ಸಾವನ್ನಪ್ಪಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೇವಲ 2-3 ಸಾವಿರ ರೂ. ಪರಿಹಾರಧನ ನೀಡುತ್ತಾರೆ. ಆದರೆ ಒಂದು ಜರ್ಸಿ ತಳಿಯ ಹಸುಗೆ ಕನಿಷ್ಠ 40 ರಿಂದ 50 ಸಾವಿರ ರೂ ಬೆಲೆ ಇದೆ. ಹೀಗಾಗಿ ಜಾನುವಾರುಗಳನ್ನು ಸಾಕಿಕೊಂಡು ಬದುಕು ದೂಡುತ್ತಿರುವ ಬಡ ರೈತರು ಹುಲಿದಾಳಿಯಿಂದ ಕಂಗಾಲಾಗಿದ್ದಾರೆ.