– ವಿಚಾರಣೆಯ ಬಳಿಕ ಎಲ್ಲವನ್ನೂ ಬಿಚ್ಚಿಡ್ತೇನೆ
ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ಐವರು ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮೃತ ಮಧು ಸಾಗರ್ ಡೆತ್ ನೋಟ್ ಸಿಗುತ್ತಿದ್ದಂತೆ ಪೊಲೀಸರ ವಿಚಾರಣೆಯಲ್ಲಿರುವ ಶಂಕರ್ ನನ್ನ ಮಗನ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ವಿಚಾರಣೆಗೆ ಹಾಜರಾದ ಶಂಕರ್, ನನ್ನ ಮಗ ಡೆತ್ ನೋಟ್ನಲ್ಲಿ ಹೇಳೊರೋದೆಲ್ಲಾ ಸುಳ್ಳು ಆಗಿದೆ. ನಾನು ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದಿದ್ದೇನೆ. 36 ವರ್ಷದ ಸಾಹಿತ್ಯ, 28 ವರ್ಷದ ಪತ್ರಿಕೋದ್ಯಮ, ನಿಮ್ಮ ವಯಸ್ಸಿನಷ್ಟು ನಂಗೆ ಅನುಭವ ಇದೆ. ಮೂವತ್ತು ವರ್ಷಗಳ ಹಿಂದೆಯೇ ನಾನು ಎರಡು ಬಾರ್ಗಳ ಓನರ್ ಆಗಿದ್ದವನು. ಇನ್ನು ತುಂಬಾ ಸತ್ಯಗಳಿವೆ, ವಿಚಾರಣೆ ಮುಗಿಸಿಕೊಂಡು ಬಂದು ಎಲ್ಲವನ್ನೂ ಬಿಚ್ಚಿಡುತ್ತೇನೆ. ಶಂಕರ್ ಆಕ್ರೋಶದ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ
ಪ್ರಕರಣದ ಹಿನ್ನೆಲೆ ಏನು?:
ತಿಗಳರಪಾಳ್ಯದ ಐವರ ಆತ್ಮಹತ್ಯೆ ರಹಸ್ಯ ಬಗೆದಷ್ಟು ಬಯಲಾಗ್ತಿದೆ. ಡೆತ್ ನೋಟ್ ಬರೆದಿಟ್ಟು ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಸಿಂಚನಾ, ಸಿಂಧುರಾಣಿ, ಮಧುಸಾಗರ್ ಹೀಗೆ ಪ್ರತಿಯೊಬ್ಬರೂ ಡೆತ್ನೋಟ್ ಬರೆದಿದ್ದಾರೆ. ಈ ಮೂಲಕ ಶಂಕರ್ ಹಾಗೂ ಅಳಿಯಂದಿರ ಪಾಲಿಗೆ ಇದು ಕಂಟಕವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಮೂವರ ಡೆತ್ನೋಟ್ನ ಮುಖಪುಟದಲ್ಲಿ ಒಂದೇ ರೀತಿಯ ಫೋಟೋ ಹಾಕಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ತಂದೆ ಶಂಕರ್ ಅನೈತಿಕ ಸಂಬಂಧವೇ ಕುಟುಂಬಕ್ಕೆ ಕುತ್ತಾಯ್ತಾ..? – ಅಪ್ಪನ ಬಗ್ಗೆ ಮೃತ ಮಕ್ಕಳ ಡೆತ್ನೋಟ್
ಡೆತ್ನೋಟ್ನಲ್ಲಿ ಏನಿದೆ?: ನಮ್ಮ ಸಾವಿಗೆ ತಂದೆ ಶಂಕರ್ ಅವರೇ ಕಾರಣ. ನಮ್ಮಪ್ಪ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಪದೇ ಪದೇ ಹಣಕ್ಕಾಗಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ತಾಯಿ ಭಾರತಿಯನ್ನ ಸಂತೋಷವಾಗಿ ಬದುಕಲು ಬಿಟ್ಟಿರಲಿಲ್ಲ. ಹೀಗಾಗಿ ಗಂಡನ ಮನೆಯಲ್ಲಿಯೂ ಕಿರುಕುಳ, ತಂದೆ ಮನೆಯಲ್ಲೂ ಕಿರುಕುಳ ಅನುಭವಿಸುತ್ತಿದ್ದೇವೆ. ಮನೆ ಸಮಸ್ಯೆಗಳ ಬಗೆಹರಿಸುವ ಗೋಜಿಗೆ ತಂದೆ ಹೋಗ್ತಿರಲಿಲ್ಲ. ಗಂಡನ ಮನೆಯಲ್ಲಿ ಅತ್ತೆ, ಮಾವಂದಿರು ಬದುಕಲು ಬಿಡಲಿಲ್ಲ. ಇತ್ತ ನಮ್ಮ ಮನೆಯಲ್ಲಿ ತಂದೆಯೇ ಸಂತೋಷವಾಗಿ ಬದುಕೋದಕ್ಕೆ ಬಿಡಲಿಲ್ಲ ಎಂದೆಲ್ಲ ಡೆತ್ ನೋಟ್ ನಲ್ಲಿ ಮಕ್ಕಳು ತಮ್ಮ ತಂದೆಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತ ಪ್ರಕರಣ ಸಂಬಂಧ ತನಿಖೆಗೆ ತೆರಳಿರುವ ಪೊಲೀಸರಿಗೆ ಶಂಕರ್ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ಪತ್ತೆಯಾಗಿದೆ. 15 ಲಕ್ಷ ರೂ. ನಗದು, ಚೆಲ್ಲಾಪಿಲ್ಲಿ ಆಗಿರುವ ಹರಿದ ನೋಟುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಣ ಹಾಗೂ ಚಿನ್ನಾಭರಣದ ಬಗ್ಗೆ ಐಟಿಗೆ ತಿಳಿಸಲು ಚಿಂತನೆ ನಡೆಸಿದ್ದಾರೆ. ಶಂಕರ್ ಮನೆಯಲ್ಲಿ ರಾಶಿರಾಶಿ ಆರ್ ಟಿಐ ಚೀಟಿ ಕೂಡ ಪತ್ತೆಯಾಗಿವೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.