ಬೆಳಗಾವಿ: ಕೆರೆಯಲ್ಲಿ ಈಜಲು ಹೋಗಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನಡೆದಿದೆ.
ಮಣ್ಣೂರ ಗ್ರಾಮದ ಕುಷಾಲ ಕಲ್ಲಪ್ಪ ಚೌಗಲೆ(12), ಆಕಾಶ ಕಲ್ಲಪ್ಪ ಚೌಗಕೆ (15) ಮತ್ತು ಸಾಹೀಲ್ ಮನೊಹರ ಬಾಳೆಕುಂದ್ರಿ (13) ಮೃತ ದುರ್ದೈವಿಗಳು. ಈ ಮೂವರು ಮಕ್ಕಳು ಅಕ್ಕಪಕ್ಕದ ಮನೆಯವರಾಗಿದ್ದಾರೆ.
ಭಾನುವಾರ ಶಾಲೆಗೆ ರಜಾ ಇದ್ದ ಕಾರಣ ಊರಿನ ಮುಂದೆ ಹೊಂಡದಂತೆ ಇರುವ ಕೆರೆಯಲ್ಲಿ ಈಜು ಬಾರದೇ ಇದ್ದರೂ ಸಹ ಮೂವರು ಮಕ್ಕಳು ಸೇರಿ ಪ್ಲಾಸ್ಟಿಕ್ ಡಬ್ಬಿಗಳನ್ನು ತೆಗೆದುಕೊಂಡು ಈಜು ಕಲಿಯಲೆಂದು ಹೊಗಿದ್ದರು. ಆದರೆ ಮಕ್ಕಳು ಮಾತ್ರ ಆ ಪ್ಲಾಸ್ಟಿಕ್ ಡಬ್ಬಿಯನ್ನು ಬಳಸದೆ ನೀರಿನಲ್ಲಿ ಇಳಿದಿದ್ದಾರೆ. ಹೀಗಾಗಿ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.