ಬೆಂಗಳೂರು: ಸರ್ಕಾರ ರಚನೆಯಾದಗಿನಿಂದ ರಾಜೀನಾಮೆ ನೀಡುವುದು ನಡೆಯುತ್ತಿದೆ. ಹೀಗಾಗಿ ಇದೇನು ಆಘಾತಕಾರಿ ಸುದ್ದಿಯಲ್ಲ. ಇದರಿಂದ ಸಿಎಂಗೂ ಶಾಕಿಂಗ್ ಆಗಿಲ್ಲ ಎಂದು ಸಚಿವ ಪುಟ್ಟರಾಜು ಅವರು ದೆಹಲಿಯ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.
ದೂರವಾಣಿಯ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪುಟ್ಟರಾಜು ಅವರು, ಅಮೆರಿಕಾದಲ್ಲಿದ್ದಾಗಲೇ ಈ ಎಲ್ಲ ವಿಚಾರವೂ ಗೊತ್ತಾಗಿದೆ. ಶಾಸಕರ ರಾಜೀನಾಮೆ ಸಿಎಂ ಗಮನಕ್ಕೂ ಬಂದಿದೆ. ಸದ್ಯಕ್ಕೆ ದೆಹಲಿಗೆ ಬಂದಿದ್ದೇವೆ. ಬೆಂಗಳೂರಿಗೆ ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈಗಾಗಲೇ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಬೆಂಗಳೂರಿಗೆ ಬಂದು ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ಜೊತೆ ಸಮಾಲೋಚನೆ ಮಾಡುತ್ತೇವೆ. ನಂತರ ಮುಂದೇನು ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಎಲ್ಲ ವಿಚಾರವೂ ಗೊತ್ತಿದ್ದ ಹಿನ್ನೆಲೆಯಲ್ಲಿ ಇದೇನು ಶಾಕಿಂಗ್ ನ್ಯೂಸ್ ಆಗಿಲ್ಲ. ಸರ್ಕಾರ ರಚನೆಯಾದಗಿನಿಂದಲೂ ಈ ರೀತಿ ನಡೆಯುತ್ತಿದೆ. ಹೀಗಾಗಿ ಎಲ್ಲ ವಿಚಾರವೂ ಗೊತ್ತಿತ್ತು ಎಂದು ಪುಟ್ಟರಾಜು ಹೇಳಿದ್ದಾರೆ.
ರಾಮಲಿಂಗಾರೆಡ್ಡಿ ಜೊತೆ ಸಿಎಂ ಸಂಪರ್ಕದಲ್ಲಿ ಇದ್ದಾರೆ. ಅತೃಪ್ತ ಶಾಸಕರನ್ನು ಮನವೊಲಿಸಲು ಪಯತ್ನ ಮಾಡುತ್ತೇವೆ. ಉಳಿದ ಶಾಸಕರು ಹೋಗದಂತೆ ಕ್ರಮಕೈಗೊಳ್ಳಲಾಗುತ್ತದೆ. ಇದರಿಂದ ಶಾಕ್ ಆಗುವ ಪ್ರಶ್ನೆಯೇ ಇಲ್ಲ. ಎಲ್ಲವೂ ಗೊತ್ತಿತ್ತು. ಆದರೆ ಮುಂಬೈಗೆ ಸಿಎಂ ಹೋಗುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಕೂಡ ಈ ಬೆಳವಣೆಗೆ ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಬೆಂಗಳೂರಿಗೆ ಬಂದು ಏನು ನಡೆದಿದೆ ಅಂತ ತಿಳಿದುಕೊಂಡು ಬಳಿಕ ಮಾತನಾಡುತ್ತೇವೆ ಎಂದು ಪುಟ್ಟರಾಜು ತಿಳಿಸಿದರು.