ಗಾಂಧಿನಗರ: ಗುಜರಾತಿನಲ್ಲಿ ನಡೆದಿರುವುದು ಚಾಣಕ್ಯರ ರಣನೀತಿ ಅಲ್ಲ, ಇದು ಕೇವಲ ದುಡ್ಡಿನ ರಣನೀತಿ ಅಂತಾ ಎಂದು ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಗುಜರಾತ್ ವಿಧನಾಸಭಾ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್ ಜನ ಎಚ್ಚೆತ್ತುಕೊಂಡಿದ್ದು, ಅವರಿಗೆ ಏನು ಬೇಕು, ಬೇಡ ಎಂಬುದನ್ನು ಅರಿತುಕೊಂಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಜನರು ಜಾಗೃತರಾಗಬೇಕಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಜಯವನ್ನು ಸಾಧಿಸಿದೆ. ಈ ಬಾರಿ ಗುಜರಾತಿನ ಜನರು ಹೆಚ್ಚಿನ ಸಂಖ್ಯೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ನಾನೊಬ್ಬ ಹೋರಾಟಗಾರ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಬಿಜೆಪಿ ನಮ್ಮ ಸಮುದಾಯದ ಜನರಿಗೆ ಮೋಸ ಮಾಡಿದ್ದು, ಆ ಪಕ್ಷದ ವಿರುದ್ಧ ಯಾವಗಲೂ ಹೋರಾಟ ನಡೆಯುತ್ತಿರುತ್ತದೆ ಅಂತಾ ತಿಳಿದರು.
ಇವಿಎಂ ಗೊಂದಲ: ಮತದಾನದ ವೇಳೆಯಲ್ಲಿ ರಾಜ್ಕೋಟ್, ಅಹಮದಾಬಾದ್ ಮತ್ತು ಸೂರತ್ ನ ಕೆಲವು ಭಾಗಗಳಲ್ಲಿ ಇವಿಎಂ ಯಂತ್ರವನ್ನು ತಿರುಚಲಾಗಿದೆ. ಆದರೆ ಬಿಜೆಪಿ ಎವಿಎಂ ಯಂತ್ರವನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ನನಗೆ ಇವಿಎಂ ಯಂತ್ರದ ಬಗ್ಗೆ ಸಂಪೂರ್ಣ ನಂಬಿಕೆಯಿಲ್ಲ. ಬಿಜೆಪಿ ಇವಿಎಂ ಯಂತ್ರಗಳಲ್ಲಿ ಕುತಂತ್ರ ಮಾಡಿ ಗೆಲವುನ್ನು ಸಾಧಿಸಿದೆ. ಈ ಕಾರಣದಿಂದ ಚುನಾವಣಾ ಆಯೋಗ ಮತ್ತೊಮ್ಮೆ ಮತಗಳ ಮರು ಎಣಿಕೆ ನಡೆಸಬೇಕು ಎಂದು ಹಾರ್ದಿಕ್ ಪಟೇಲ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಎಟಿಎಂ ಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದ್ದು, ನಿಮ್ಮ ಹಣದ ಬಗ್ಗೆ ಎಚ್ಚರಿಕೆಯಿಂದರಿಬೇಕು ಎಂದು ಸರ್ಕಾರ ತಿಳಿಸಿತ್ತು. ಎಟಿಎಂ ರೀತಿಯಲ್ಲಿ ಇವಿಎಂ ಕೂಡ ಒಂದು ಸಾಮಾನ್ಯ ಯಂತ್ರವಾಗಿದ್ದರಿಂದ ಇದನ್ನು ಹ್ಯಾಕ್ ಮಾಡಿರಬಹುದು. ನಮ್ಮೆಲ್ಲರ ದೇಹವನ್ನು ದೇವರು ರೂಪಿಸಿದ್ರು, ಡಾಕ್ಟರ್ ದೇಹದಲ್ಲಿ ಏನು ಬೇಕಾದ್ರೂ ಪ್ರಯೋಗಗಳನ್ನು ಮಾಡುತ್ತಾರೆ. ಹೀಗಾಗಿ ಮಾನವ ನಿರ್ಮಿತ ಇವಿಎಂ ಗಳಲ್ಲಿ ಬದಲಾಯಿಸುವುದು ಅಷ್ಟು ಸಾಧ್ಯವಿಲ್ಲವೇ ಅಂತಾ ಹಾರ್ದಿಕ್ ಪ್ರಶ್ನೆ ಮಾಡಿದರು.